ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ನಾಲ್ವರು ಆರೋಪಿಗಳಿಗೆ ಮಂಗಳವಾರ ಜಿಲ್ಲಾ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳಾದ ಸುರೇಶ್ ಮೆಂಡನ್, ಪ್ರಸಾದ್, ಉಮೇಶ್ ಶೆಟ್ಟಿ, ರತನ್ ಅವರನ್ನು ಮಂಗಳವಾರ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕಾರವಾರ ಜೈಲಿಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರಜಾವಾಣಿಗೆ ತಿಳಿಸಿದರು.
ಈಗಾಗಲೇ ಪ್ರಕರಣ ಆರೋಪಿಗಳಾದ ಹಿರಿಡಯಕ ಎಸ್ಐ ಡಿ.ಎನ್.ಕುಮಾರ್, ಸಿಬ್ಬಂದಿ ಮೋಹನ್ ಕೊತ್ವಾಲ್, ಗೋಪಾಲ್ ಹಾಗೂ ಆರೋಪಿಗಳಾದ ಚೇತನ್, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ ಕಾರವಾರ ಜೈಲಿನಲ್ಲಿದ್ದು, ಈಗ ಎಲ್ಲ ಆರೋಪಿಗಳೂ ಅದೇ ಜೈಲು ಸೇರಿದ್ದಾರೆ.
ಇದೇವೇಳೆ ದನಕಳ್ಳಸಾಗಣೆ ಪ್ರಕರಣದ ಆರೋಪಿ ಜಯಕುಮಾರ್ ಎಂಬುವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ಬಳಿಕ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.