ಪೇಜಾವರ ಶ್ರೀಗಳು ಇತರ ಪೀಠಾಧಿಪತಿಗಳಂತೆ ‘ತಟಸ್ಥ’ರಾಗಿ ನಿಲ್ಲದೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳ ಬಗೆಗೆ ಆಗಾಗ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಬಹುತೇಕ ಅಭಿಪ್ರಾಯಗಳು ಚರ್ಚಾಸ್ಪದವಾಗಿರುತ್ತವೆ ಎಂಬುದು ಬೇರೆ ಮಾತು. ಅವರು ವಿಚಾರವಾದಿಗಳ ಕಣ್ಣಿಗೆ ಮೂಲಭೂತವಾದಿಯಂತೆಯೂ, ಧಾರ್ಮಿಕರ ಕಣ್ಣಿಗೆ ಪ್ರಗತಿಪರರಂತೆಯೂ ಕಾಣುವುದುಂಟು. ಕಳೆದ ವರ್ಷ ಅವರು ನಡೆಸಿದ ಇಫ್ತಾರ್ ಕೂಟ ಕೂಡ ವಿವಾದಕ್ಕೆ ಒಳಗಾಗಿತ್ತು.