ಬೆಂಗಳೂರು: 2018ನೇ ಸಾಲಿನ ‘ಬರಗೂರು ಪ್ರಶಸ್ತಿ’ಗೆ ಸಾಹಿತಿ ಡಾ.ಬಿ.ಎಲ್.ವೇಣು, ನಿರ್ದೇಶಕ ಎಸ್.ಕೆ. ಭಗವಾನ್ ಭಾಜನರಾಗಿದ್ದಾರೆ.
ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದ ತಲಾ ಒಬ್ಬರಿಗೆ ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ದಿಂದ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ₹25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿಗೆ ಡಾ.ಜಿ.ರಾಮಕೃಷ್ಣ ಅವರ ‘ಋಗ್ವೇದ ಪ್ರವೇಶಿಕೆ ಐತಿಹ್ಯ ಮತ್ತು ವಾಸ್ತವ’ ಕೃತಿ ಮತ್ತು ರೇಖಾ ಕಾಖಂಡಕಿ ಅವರ ‘ವೈವಸ್ವತ’ ಕಾದಂಬರಿ ಆಯ್ಕೆಯಾಗಿವೆ. ಪುಸ್ತಕ ಪ್ರಶಸ್ತಿಯು ತಲಾ ₹10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಇದೇ 10ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಿದೆ.