ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಾನಾ ಒಕ್ಕೂಟಗಳು, ರೈತರಿಂದ ಖರೀದಿಸುವ ಹಾಲಿಗೆ ₹ 1 ರಿಂದ ₹ 2ರವರೆಗೆ (ಪ್ರತಿ ಲೀಟರ್ಗೆ) ಕಡಿತ ಮಾಡಿವೆ.
‘ಸಾಮಾನ್ಯವಾಗಿ ಜೂನ್, ಜುಲೈ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚು ಹಾಲು ಶೇಖರಣೆಯಾಗುತ್ತದೆ. ಆದರೆ, ಈ ಬಾರಿ ಉತ್ತಮ ಮಳೆಯಾಗುತ್ತಿರುವ ಕಾರಣ ಮೇ ತಿಂಗಳಲ್ಲೇ ನಿರೀಕ್ಷೆಗೂ ಮೀರಿ ಹಾಲಿನ ಶೇಖರಣೆಯಾಗಿದೆ’ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇದೆ. ಹೀಗಿದ್ದರೂ, ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕೆಂಬ ಕಾರಣದಿಂದ ಪ್ರತಿ ದಿನ 81.78 ಲಕ್ಷ ಲೀಟರ್ ಹಾಲು ಖರೀದಿಸುತ್ತಿದ್ದೇವೆ.’
‘ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹಾಲಿನ ಖರೀದಿ ಹಾಗೂ ಮಾರಾಟದ ದರವನ್ನು ಒಕ್ಕೂಟಗಳೇ ಸ್ವತಂತ್ರವಾಗಿ ನಿಗದಿಪಡಿಸುತ್ತವೆ. ಅಂತೆಯೇ, ಈಗ ರೈತರಿಂದ ಹಾಲು ಖರೀದಿಸುವ ದರವನ್ನು ₹ 1 ರಿಂದ ₹ 2ರಂತೆ ಕಡಿತ ಮಾಡಿ ಒಕ್ಕೂಟಗಳು ತೀರ್ಮಾನ ತೆಗೆದುಕೊಂಡಿವೆ. ಮಳೆಗಾಲ ಮುಗಿದ ಬಳಿಕ, ಪುನಃ ದರ ಹೆಚ್ಚಳ ಮಾಡಲಾಗುವುದು. ಹೈನುಗಾರಿಕೆಗೆ ಸರ್ಕಾರ ನೀಡುತ್ತಿರುವ ₹ 5 (ಲೀಟರ್ಗೆ) ಪ್ರೋತ್ಸಾಹ ಧನದಲ್ಲಿ ಯಾವುದೇ ಕಡಿತ ಮಾಡಿಲ್ಲ’ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.