ಬೆಂಗಳೂರು: ‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬಾರದು’ ಎಂದು ವಾಲ್ಮೀಕಿ ಹಾಗೂ ಭೋವಿ ಸಮುದಾಯಗಳ ಮುಖಂಡರು ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸಭೆ ನಡೆಸಿದ ಮುಖಂಡರು, ‘27 ವರ್ಷಗಳಿಂದ ಮುನಿಯಪ್ಪ ಸಂಸದರಾಗಿದ್ದಾರೆ. ಅವರು ಪಕ್ಷದ ಹಾಗೂ ದಲಿತರ ಏಳಿಗೆಗೆ ಕೆಲಸ ಮಾಡಿಲ್ಲ. ಜತೆಗೆ, ಒಳಜಾತಿಗಳಲ್ಲಿ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿಧಾನಸಭಾ ಚುನಾವಣೆಯಲ್ಲಿ ಪುತ್ರಿ ರೂಪಾ ಶಶಿಧರ್ಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದಾರೆ. ಮತ್ತೊಬ್ಬ ಪುತ್ರಿಗೆ ಟಿಕೆಟ್ ಕೊಡಿಸಲು ಶತಪ್ರಯತ್ನ ನಡೆಸಿದ್ದರು. ಅವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರ ಬದಲು ಹೊಸಬರಿಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು.
ಮುಳಬಾಗಿಲಿನ ಮುನಿ ಆಂಜನಪ್ಪ, ಬಾಲಾಜಿ ಚನ್ನಯ್ಯ, ಅಂಬರೀಷ್, ಶ್ರೀಕೃಷ್ಣ, ತಿಮ್ಮಯ್ಯ ಸೇರಿದಂತೆ ಹಲವರು ಮುಖಂಡರು ಪಾಲ್ಗೊಂಡಿದ್ದರು.