ಕಲಬುರ್ಗಿ: ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆ ಹಾಗೂ ಅಪ್ಪಾ ಪಬ್ಲಿಕ್ ಶಾಲೆಯ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಬೃಹತ್ ರ್ಯಾಲಿ ಮೂಲಕ ಮಂಗಳವಾರ ನಗರದ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’, ‘ನೀರಿಗಾಗಿ ಅರಣ್ಯ’ ಹಾಗೂ ‘ಗಾಳಿಯೇ ಗುರು, ನೀರು ತಂದೆ, ಭೂಮಿ ತಾಯಿ’ ಎಂಬ ಫಲಕ, ಬ್ಯಾನರ್ಗಳನ್ನು ಹಿಡಿದುಕೊಂಡ ವಿದ್ಯಾರ್ಥಿಗಳು ಎಸ್ಬಿಆರ್ ಶಾಲೆ ಆವರಣದಿಂದ ಆನಂದ ಹೋಟೆಲ್ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ನಗರವನ್ನಾಗಿ ಮಾಡಲು ಸರ್ಕಾರದಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ವಿಜ್ಞಾನ ಶಿಕ್ಷಕ ಪ್ರಸಾದ್ ಜಿ.ಕೆ. ಮಾತನಾಡಿ, ‘ಶರಣಬಸವೇಶ್ವರ ಪಬ್ಲಿಕ್ ಶಾಲೆಯು ಮೊದಲಿನಿಂದಲೂ ಪರಿಸರ ಕಾಳಜಿಯನ್ನು ಮಾಡುತ್ತ ಬಂದಿದೆ. ಪ್ರಾಚಾರ್ಯ ಎನ್.ಎಸ್.ದೇವರಕಲ್ ಅವರು ಇಡೀ ಶಾಲೆಯ ಆವರಣವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಇದನ್ನು ಅನುಸರಿಸಬೇಕು’ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ಪ್ರತಿಯೊಬ್ಬರಿಗೂ ಒಂದೊಂದು ಸಸಿಯನ್ನು ಉಚಿತವಾಗಿ ನೀಡಲಾಯಿತು. ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಿವಪ್ರಕಾಶ ವಾಲಿ, ಕಾಲೇಜಿನ ಪ್ರಾಧ್ಯಾಪಕ ಶ್ರೀಶೈಲ ಹೊಗಾಡೆ, ಶಿಕ್ಷಕರಾದ ಶಂಭುಲಿಂಗಪ್ಪ, ದಿಗಂಬರ್ ಕುಲಕರ್ಣಿ, ಅನಿಲ್ಕುಮಾರ್ ಇದ್ದರು.