ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ

ಅಭ್ಯರ್ಥಿಗಳ ಪರ ಶಾಸಕ ರಘುಪತಿ ಭಟ್ ಮತಯಾಚಿಸಿ ವಿಶ್ವಾಸ
Last Updated 6 ಜೂನ್ 2018, 8:45 IST
ಅಕ್ಷರ ಗಾತ್ರ

ಉಡುಪಿ: ‘ಇದೇ 8ರಂದು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಕ್ರಮವಾಗಿ ಆಯನೂರು ಮಂಜುನಾಥ್ ಹಾಗೂ ಗಣೇಶ್‌ ಕಾರ್ಣಿಕ್ ಸ್ಪರ್ಧಿಸಿದ್ದಾರೆ. ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ಶಾಸಕ ರಘುಪತಿ ಭಟ್ ಮನವಿ ಮಾಡಿದರು.

ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಹಿಂದಿನಿಂ ದಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾ  ಬಂದಿದ್ದಾರೆ. ಡಿ.ಎಚ್‌.ಶಂಕರಮೂರ್ತಿ ಅವರು 5 ಬಾರಿ ಪರಿಷತ್ ಸದಸ್ಯರಾ ಗಿದ್ದರು. ಮುಂದೆಯೂ ಬಿಜೆಪಿ ಅಭ್ಯರ್ಥಿ ಗಳು ಗೆಲ್ಲುವ ವಿಶ್ವಾಸ ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದವೀಧರರ ಕ್ಷೇತ್ರದಲ್ಲಿ ಪದವೀ ಧರರ ನೋಂದಣಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 8,276 ಪದವೀಧರರು, 2,768 ಶಿಕ್ಷಕ ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನೋಂದಣಿ ಮಾಡಿಕೊಂಡವರೆಲ್ಲ ಮತದಾನ ಮಾಡಬೇಕು ಎಂದು ಅವರು ವಿನಂತಿಸಿದರು.

ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ರುವ ಆಯನೂರು ಮಂಜುನಾಥ್‌ ಅವರು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಅನುಭವಿ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್‌ ಕಾರ್ಣಿಕ್ ಕೂಡ ನಿವೃತ್ತ ಸೈನಿಕರು. ಶಿಕ್ಷಕರ ಸಮಸ್ಯೆಗಳ ಬಗ್ಗೆ ತಕ್ಷಣ ಸ್ಪಂದಿಸುವ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.

ಹಿಂದೆ ಶಾಸಕರಾಗಿದ್ದ ಅವಧಿ ಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಭಾಗವಾರು, ವಿಷಯವಾರು ಅತಿ ಹೆಚ್ಚು ಅಂಕಪಡೆದ ಶಾಲೆಯ ಶಿಕ್ಷಕರಿಗೆ ವಿಷಯವಾರು ಸನ್ಮಾನ ಮಾಡಲಾಗುತ್ತಿತ್ತು. ಕಳೆದ 5 ವರ್ಷಗಳಿಂದ ಸನ್ಮಾನ ಕಾರ್ಯಕ್ರಮ ನಿಂತುಹೋಗಿತ್ತು. ಶಿಕ್ಷಕರ ದಿನಾಚರಣೆಯಂದು ಮತ್ತೆ ಶಿಕ್ಷಕರನ್ನು ಗೌರವಿಸುವ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಮುಖಂಡರಾದ ರಾಘವೇಂದ್ರ ಕಿಣಿ, ಜಗದೀಶ್ ಆಚಾರ್ಯ, ಗಿರೀಶ್‌ ಇದ್ದರು.

ವಿಶೇಷ ಅನುದಾನ ಕೊಡಿ’

ಉಡುಪಿ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ನಲುಗಿದ್ದು, ನೂರಾರು ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ರೀತಿಯ ಪ್ರಾಕೃತಿಕ ವಿಕೋಪಗಳು ಹಿಂದೆಂದೂ ಆಗಿರಲಿಲ್ಲ. ಕೂಡಲೇ ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದರು.

ವಿಧಾನಸಭಾ ಕ್ಷೇತ್ರದಲ್ಲಿ 203 ಮನೆಗಳಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮನೆಯೊಂದಕ್ಕೆ ಗರಿಷ್ಠ ₹90 ಸಾವಿರ ಪರಿಹಾರ ನೀಡಲು ಮಾತ್ರ ಸಾಧ್ಯ. ಆದರೆ, ಪ್ರತಿ ಮನೆಯಲ್ಲೂ ಕನಿಷ್ಠ ₹4ರಿಂದ ₹8 ಲಕ್ಷದವರೆಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರಿಗೆ ತಲಾ ₹2 ಲಕ್ಷ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ಮಳೆ–ಗಾಳಿಗೆ ಉಡುಪಿಯಲ್ಲಿ 353 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ, 40 ಟ್ರಾನ್ಸ್‌ಫಾರಂಗಳು ಸುಟ್ಟುಹೋಗಿವೆ. ಬೆಸ್ಕಾಂ ಸಿಬ್ಬಂದಿಯ ಪರಿಶ್ರಮದಿಂದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ಒಳಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ಮಳೆನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ರಸ್ತೆಗಳು ಹಾಳಾಗಿವೆ. ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಇರುವ ಕಾರಣಕ್ಕೆ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ನೀತಿಸಂಹಿತೆ ಮುಗಿದ ಬಳಿಕ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT