ಕೂಡ್ಲಿಗಿ: ಜನ, ಜಾನುವಾರುಗಳಿಗೆ ಯಾವುದೇ ರೋಗ ರುಜಿನ ಬಾರದಂತೆ ಹಾಗೂ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುವ ಹೋಳಿಗೆಮ್ಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಿಗಾಗಿ ಹೋಳಿಗೆ ಹಾಗೂ ಇತರೆ ಭಕ್ಷ್ಯಗಳನ್ನು ಸಿದ್ದಪಡಿಸುವ ಮಹಿಳೆಯರು, ಅದನ್ನು ಪುಟ್ಟ ಮಡಕೆಯಲ್ಲಿ ಬೇವಿನ ಎಲೆಯೊಂದಿಗೆ ತಂದು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಊರಮ್ಮ ದೇವಿಯ ಆಲದ ಮರದ ಬಳಿ ಎಡೆ ಇಟ್ಟು ಪೂಜಿಸಿದರು.
ಹೋಳಿಗೆ ಎಡೆ ತೆಗೆದುಕೊಡು ಹೋಗುವಾಗ ಯಾರೊಂದಿಗೂ ಮಾತನಾಡಬಾರದು ಎಂಬ ಪ್ರತೀತಿ ಇರುವ ಕಾರಣ ಭಕ್ತರು ಮಂಗಳವಾರ ಮೌನವಾಗಿಯೇ ಆಲದ ಮರದತ್ತ ಹೆಜ್ಜೆ ಹಾಕಿದರು. ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮನೆಯ ಸದಸ್ಯರೊಂದಿಗೆ ಊಟ ಮಾಡಿದರು. ಈ ಹಬ್ಬಕ್ಕೆ ಯಾರನ್ನೂ ಕರೆಯುವಂತಿಲ್ಲ. ಜತೆಗೆ ಬೇರೆಯವರಿಗೂ ಊಟ ಕೊಡಬಾರದು ಎಂಬು ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹೋಳಿಗೆಮ್ಮ ಹಬ್ಬ ಈ ಭಾಗದ ವಿಶೇಷ .