ಸಕಲೇಶಪುರ: ‘ಎತ್ತಿನಹೊಳೆ ಯೋಜನೆಯಿಂದ 2020ರ ಜೂನ್ ಒಳಗೆ ಕೋಲಾರಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ‘ಇದೊಂದು ಕುಡಿಯುವ ನೀರಿನ ಮಹತ್ವದ ಯೋಜನೆ. ಇದರಿಂದ ಬಯಲು ಸೀಮೆಯ ಜನರ ದಾಹ ನೀಗಲಿದೆ. ಕುಡಿಯುವ ನೀರಿಗಾಗಿ ಕೊಲಾರ, ಚಿಕ್ಕಬಳ್ಳಾಪುರ ಭಾಗದ ಜನರ ಸಮಸ್ಯೆ ಹೇಳತೀರದು. ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಪ್ರತಿ 15 ದಿನಗಳಿಗೊಮ್ಮೆ ಕಾಮಗಾರಿ ಪ್ರಗತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಾಗ ಖುದ್ದು ಭೇಟಿ ನೀಡಿ ಚುರುಕುಗೊಳಿಸಲಾಗುವುದು’ ಎಂದು ತಿಳಿಸಿದರು.
‘ಬೆಂಗಳೂರಿನಲ್ಲಿ ಕುಳಿತು ಕಾಮಗಾರಿ ಪ್ರಗತಿ ವಿವರ ಪಡೆಯುವುದಕ್ಕಿಂತ ಖುದ್ದು ಭೇಟಿ ನೀಡಿದರೆ ವಾಸ್ತವ ತಿಳಿಯಲಿದೆ ಎಂದು ಭೇಟಿ ನೀಡಿದ್ದೇನೆ‘ ಎಂದರು.
ಯೋಜನೆ ಅಣೆಕಟ್ಟು ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕುಂಬರಡಿ, ಕೆಸಗಾನಹಳ್ಳಿ, ಮಾರನಹಳ್ಳಿ, ಹೊಂಗಡಹಳ್ಳ, ದೊಡ್ಡನಾಗರ, ಹೆಬ್ಬನಹಳ್ಳಿ 220 ಕೆ.ವಿ ಪವರ್ ಸ್ಟೇಷನ್ಗೆ ಭೇಟಿ ನೀಡಿದ್ದರು.
ವಿಶ್ವೇಶ್ವರಯ್ಯ ಜಲನಿಗಮದ ಮುಖ್ಯ ಎಂಜಿನಿಯರ್ ಚನ್ನಪ್ಪನಾಯಕ, ಸೂಪರಿಂಟೆಂಡಿಂಗ್ ಎಂಜಿನಿಯರ್ ವೇಣುಗೋಪಾಲ್, ಕಾರ್ಯಪಾಲಕ ಎಂಜಿನಿಯರ್ ಹರೀಶ್, ಎಂಜಿನಿಯರ್ಗಳಾದ ಗುರುಪ್ರಸಾದ್, ತಹಶೀಲ್ದಾರ್ ನಾಗಭೂಷಣ್, ಶ್ರೀನಿವಾಸಪುರ ಜಿ.ಪಂ ಕ್ಷೇತ್ರದ ಸದಸ್ಯ ನಾರಾಯಣಸ್ವಾಮಿ ಇದ್ದರು.