ಮುಂಬೈ: ಮಾಧ್ಯಮಗಳು ‘ದಲಿತ’ ಪದವನ್ನು ಬಳಸದಂತೆ ನಿರ್ದೇಶಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಸರ್ಕಾರಿ ದಾಖಲೆಗಳಿಂದ ದಲಿತ ಪದ ತೆಗೆದುಹಾಕುವಂತೆ ಕೋರಿ ಪಂಕಜ್ ಮೆಶ್ರಾಮ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನಾಗ್ಪುರ ಪೀಠ, ಈ ಸೂಚನೆ ನೀಡಿತು.
‘ನೌಕರರಿಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಅಗತ್ಯ ಸೂಚನೆ ನೀಡಿದೆ. ಹಾಗೆಯೇ ಮಾಹಿತಿ ಇಲಾಖೆಗೂ ನಿರ್ದಿಷ್ಟ ಸೂಚನೆ ನೀಡಬೇಕು’ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ಧರ್ಮಾಧಿಕಾರಿ ಮತ್ತು ಝಡ್.ಎ. ಹಕ್ ಅವರಿದ್ದ ಪೀಠ ಆದೇಶಿಸಿತು.
ಮಾರ್ಚ್ 15ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಕಳುಹಿಸಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದಲಿತ ಪದದ ಬದಲಾಗಿ ‘ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ’ ಎಂದು ಬಳಸುವಂತೆ ನಿರ್ದೇಶನ ನೀಡಿತ್ತು. ಮೆಶ್ರಾಮ್ ಅವರ ಪರ ವಕೀಲರು ಇದನ್ನು ನ್ಯಾಯಾಲಯದ ಗಮನಕ್ಕೆ ತಂದರು.