ಬೆಂಗಳೂರು: ನಗರ ಹಸಿರಾಗಿಸಲು ಹೊರಟಿದೆ ಹಸಿರು ರಥ. ಯಡಿಯೂರು ಪ್ರದೇಶದ ಒಂದಿಷ್ಟು ಸಮಾನಮನಸ್ಕ ಹಸಿರು ಹರಿಕಾರರು ಸಸಿ ಹಿಡಿದು ಹೊರಟಿದ್ದಾರೆ.
ಇವರಲ್ಲಿ ಬಹುತೇಕರುಸಾಫ್ಟ್ವೇರ್ ಎಂಜಿನಿಯರ್ಗಳು, ಬೇರೆ ಬೇರೆ ಕ್ಷೇತ್ರಗಳ ಯುವಜನರು, ನಿವೃತ್ತರು ಇದ್ದಾರೆ. ಪ್ರತಿದಿನ ಬೆಳಿಗ್ಗೆ ಈ ತಂಡದ ಹಸಿರು ರಥ ಹೆಸರಿನ ‘ಇಕೋ’ ವಾಹನ ಸಸಿಗಳನ್ನು ಹೊತ್ತು ನಗರದ ವಿವಿಧ ಬಡಾವಣೆಗಳಿಗೆ ಹೋಗುತ್ತದೆ. ಕೆಲವು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ್ದ ಈ ಅಭಿಯಾನಕ್ಕೆ 2017ರ ವಿಶ್ವ ಪರಿಸರ ದಿನಾಚರಣೆಯಂದು ಒಂದು ಮೂರ್ತರೂಪ ಸಿಕ್ಕಿದೆ.
ಈ ತಂಡ ಕೇವಲ ಗಿಡ ಬೆಳೆಸಿ ಹೋಗಿ ಬಿಡುವುದಿಲ್ಲ. ಪ್ರತಿದಿನ ಆ ಗಿಡಗಳಉಸ್ತುವಾರಿ ನೋಡಿಕೊಳ್ಳುತ್ತಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಅವುಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವ ಕಾರ್ಯ ಮಾಡುತ್ತಿದೆ. ಹಾಗೆ 10 ಜನರ ತಂಡ ಒಂದು ವರ್ಷದಲ್ಲಿ 335 ಗಿಡಗಳನ್ನು ನೆಟ್ಟಿದೆ. ಬೇರೆಯವರು ನೆಟ್ಟ 367 ಗಿಡಗಳನ್ನು ಈ ತಂಡನಿರ್ವಹಿಸುತ್ತಿದೆ. ಬಿಬಿಎಂಪಿ ನೆಟ್ಟ ಸಸಿಗಳು ಸೊರಗಿದ್ದರೆ ಅವುಗಳ ಪೋಷಣೆಯನ್ನೂ ಇವರು ಮಾಡುತ್ತಾರೆ.
ವಾಹನದೊಳಗೇನಿದೆ?
ಮಾರುತಿ ಇಕೋ ವಾಹನದ ಒಳಗೆ ಸಸಿಗಳು, ಕುಣಿ ತೋಡುವ ಸಾಧನಗಳು, ನೀರಿನ ಕ್ಯಾನ್, ಟ್ರೀಗಾರ್ಡ್, ಕೆಂಪು ಮಣ್ಣು ಇತ್ಯಾದಿ ಇವೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಸಹಾಯಕ ಮಹಾಪ್ರಬಂಧಕ ಡಾ.ಮಾನ್ಯ ನಾಗರಾಜ್ ಅವರು ಎರಡು ವರ್ಷ ಗಿಡ ನೆಡುವ ಪುಟ್ಟ ಪ್ರಯತ್ನ ಮಾಡಿದರು. ಅದೀಗ ವ್ಯವಸ್ಥಿತ ರೂಪ ಪಡೆದಿದೆ. ಇದೇ ಕಾರ್ಯಕ್ಕಾಗಿ ನಾಗರಾಜ್ ವಾಹನ ಕೊಂಡಿದ್ದಾರೆ.
ಕಲ್ಪನೆಯ ಹಿಂದೆ: ‘1983ರಲ್ಲಿ ಬ್ಯಾಂಕ್ಗೆ ಕ್ಲರ್ಕ್ ಆಗಿ ಸೇರಿದ್ದೆ. ಆಗ ಸಮುದಾಯ ಸೇವೆ ಎಂಬ ಪರಿಕಲ್ಪನೆ ಇತ್ತು. ಅದರ ಅಡಿ ಗಿಡ ನೆಡುವುದನ್ನು ರೂಢಿಸಿದೆ. ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೇರಿ ಗಿಡ ನೆಡುತ್ತಿದ್ದೆವು. ಅಂದಿನಿಂದ ಇಂದಿನವರೆಗೆ ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲಾ ಪ್ರತಿ ವರ್ಷ 50ರಿಂದ 60 ಗಿಡಗಳನ್ನು ನೆಡುತ್ತಾ ಬಂದೆ. ನಿವೃತ್ತನಾದ ಬಳಿಕ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡೆ ಕೆನರಾ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಸುಹಾಸ್ ಶಾನುಭಾಗ್ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಒಟ್ಟಾರೆ ಹಸಿರು ರಥದಲ್ಲಿ 80 ಸದಸ್ಯರ ತಂಡ ಇದೆ. ಇದರ ಪೈಕಿ 12 ಜನ ಸಕ್ರಿಯರಾಗಿದ್ದಾರೆ’ ಎಂದು ನಾಗರಾಜ್ ಹೇಳಿದರು.
‘ಬಿಬಿಎಂಪಿ, ಅರಣ್ಯ ಇಲಾಖೆಯವರು ಗಿಡ ಕೊಡುತ್ತಾರೆ.ಆದರೆ, ಗುಣಮಟ್ಟದ ಗಿಡಗಳನ್ನು ಗುತ್ತಿಗೆದಾರರು ನಗರ ವ್ಯಾಪ್ತಿಯಲ್ಲಿ ನೆಡಲು ಕೊಡುತ್ತಾರೆ. ಗುಣಮಟ್ಟದ ಗಿಡಗಳನ್ನು ನಮಗೂ ಕೊಡಬೇಕು ಎಂಬುದು ನಮ್ಮ ನಿರೀಕ್ಷೆ’ ಎಂದರು ನಾಗರಾಜ್. ಸಾಫ್ಟ್ವೇರ್ ಎಂಜಿನಿಯರ್ ಆನಂದ್ ಕೂಡಾ ಈ ತಂಡದಲ್ಲಿ ಸಕ್ರಿಯರಾಗಿದ್ದಾರೆ.
ವಾಹನ ಪ್ರತಿದಿನ ಬೆಳಿಗ್ಗೆ 6.30ರಿಂದ 8.30ರವರೆಗೆ ಈ ತಂಡ ಗಿಡ ನೆಟ್ಟ ಪ್ರದೇಶದಲ್ಲಿ ಸಂಚರಿಸುತ್ತದೆ. ನಾಗರಾಜ್ ಅವರ ಸಹಾಯಕ ಕುಣಿ ತೋಡಲು, ಗಿಡ ನೆಡಲು ನೆರವಾಗುತ್ತಾರೆ. ಭಾನುವಾರ ತಂಡದ ಎಲ್ಲ ಸದಸ್ಯರು ಕಲೆತು ಗಿಡನೆಡುವ, ನಿರ್ವಹಣೆ ಕೆಲಸ ಮಾಡುತ್ತಾರೆ. ಮಾಹಿತಿಗೆ ನಾಗರಾಜ್ ಅವರ ಮೊಬೈಲ್: 990004878,
ಆನಂದ್: 9845904630
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.