ಹೈದರಾಬಾದ್: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿರುವ ಕುರಿತು ಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
‘ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್ಎಸ್ಎಸ್ ಕಚೇರಿಗೆ ಹೋಗಿರುವುದು ಕಾಂಗ್ರೆಸ್ನ ಜಾತ್ಯಾತೀತತೆಯಾ’ ಎಂದು ಓವೈಸಿ ಕುಟುಕಿದ್ದಾರೆ.
'ಜಾತ್ಯಾತೀತ ಪಕ್ಷ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಮಾಜಿ ರಾಷ್ಟ್ರಪತಿ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರ ವಿವೇಚನೆ ಏನು? ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ತಮ್ಮ ನಾಯಕ ಭಾಗವಹಿಸಿರುವ ಕುರಿತು ಕಾಂಗ್ರೆಸ್ ವಿವರಣೆ ನೀಡಬೇಕು’ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ನಲ್ಲಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿರುವ ಯೂಮುಲ್ ಕುರಾನ್ ಕಾರ್ಯಕ್ರಮದ ಸಭೆಯಲ್ಲಿ ಶುಕ್ರವಾರ ಓವೈಸಿ ಮಾತನಾಡಿದರು.
'ಕಾಂಗ್ರೆಸ್ ಕೊನೆಗೊಂಡಿದೆ. ಕಾಂಗ್ರೆಸ್ನಲ್ಲಿ 50 ವರ್ಷ ಕಳೆದ ಮತ್ತು ಭಾರತದ ರಾಷ್ಟ್ರಪತಿಯಾಗಿದ್ದವರು ಆರ್ಎಸ್ಎಸ್ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಈ ಪಕ್ಷದಿಂದಲೂ ನೀವು ಇನ್ನೂ ನಿರೀಕ್ಷೆಯ ಭರವಸೆಗಳನ್ನು ಹೊಂದಿದ್ದೀರಾ? ಎಂದು ಕೇಳಿದ್ದಾರೆ.