ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಬುದ್ಧ, ಬಸವ ಅಂಬೇಡ್ಕರ್ ಚಿತ್ರವಿರುವ ನಾಮಫಲಕಕ್ಕೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದಾರೆ.
ಗ್ರಾಮದ ಮುಖ್ಯಸ್ಥಳದಲ್ಲಿ ಅಂಬೇಡ್ಕರ್ ಕಟ್ಟೆ ನಿರ್ಮಿಸಿ ಮತ್ತು ನೀಲಿ ಧ್ವಜ ಸ್ಥಂಭಗಳನ್ನು ಸ್ಥಾಪಿಸಲಾಗಿದೆ. ಕಟ್ಟೆಯ ಮಧ್ಯದ ಫ್ಲೆಕ್ಸ್ನಲ್ಲಿ ಬುದ್ದ ಬಸವ ಮತ್ತು ಅಂಬೇಡ್ಕರ್ ಚಿತ್ರ ಹಾಕಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಪರಿಮಳ ದೇಶಪಾಂಡೆ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ ಯು.ಶರಣಪ್ಪ, ಸರ್ಕಲ್ ಇನಸ್ಪೆಕ್ಟರ್ ಎಚ್.ಎಂ.ಇಂಗಳೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರತಿಭಟನೆ: ಕೃತ್ಯ ಖಂಡಿಸಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಮುಖಂಡರು ಟೈರ್ಗಳಿಗೆ ಬೆಂಕಿ ಹಚ್ಚಿ ರಸ್ತೆತಡೆ ನಡೆಸಿದರು. ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂತೋಷ ಗುತ್ತೇದಾರ, ಮಾರುತಿ ಗಂಜಗಿರಿ, ಗೋಪಾಲ ರಾಂಪುರೆ, ಪಾಂಡುರಂಗ ಲೊಡ್ಡನೋರ್, ರೇವಣ ಸಿದ್ದ ಹೊಡೇಬೀರನಹಳ್ಳಿ, ಆನಂದ ಟೈಗರ್, ಆಕಾಶ ಕೊಳ್ಳೂರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಯುವ ಘಟಕದ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಸುನೀಲ ಲೊಡ್ಡನೋರ್, ಓಮನರಾವ್ ಕೊರವಿ ಇದ್ದರು.