ಕುಣಿಗಲ್: ಪಟ್ಟಣದ ಸತ್ಯ ಶನೇಶ್ವರ ದೇವಸ್ಥಾನದ ಧನಂಜಯಸ್ವಾಮಿ, ಕಾರಿನ ಚಾಲಕ ಶ್ರೀಧರ್ ಹಾಗೂ ಅವರೊಂದಿಗೆ ಇದ್ದ ನಯಾಜ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹ 13 ಲಕ್ಷ ವನ್ನು ಶನಿವಾರ ರಾತ್ರಿ ದರೋಡೆ ಮಾಡಲಾಗಿದೆ.
ರಾತ್ರಿ 11 ಗಂಟೆ ಹೊತ್ತಿಗೆ ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ ಧನಂಜಸ್ವಾಮಿ ಕಾರಿನಲ್ಲಿ ಮನೆಗೆ ಹೊರಟಿದ್ದರು.
ದಾರಿಯಲ್ಲಿ ಇವರ ಕಾರು ತಡೆದ ದುಷ್ಕರ್ಮಿಗಳು ಹೊಸ ಕಾರು ತಂದಿದ್ದೇವೆ ಪೂಜೆ ಮಾಡಿ ಎಂದು ಮನವಿ ಮಾಡಿದ್ದಾರೆ. ವಾಹನ ಬಿಟ್ಟು ಕೆಳಗೆ ಇಳಿಯುತ್ತಿದ್ದಂತೆ ಮುಖಕ್ಕೆ ಪೆಪ್ಪರ್ ಸ್ಪ್ರೆ ಮಾಡಿ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಧನಂಜಯಸ್ವಾಮಿ ತಪ್ಪಿಸಿಕೊಂಡು ದಾರಿಯಲ್ಲಿ ಹೊರಟಿದ್ದ ಬೇರೊಬ್ಬರ ಕಾರು ಹತ್ತಿ ರಕ್ಷಣೆ ಪಡೆದು ಬಳಿಕ ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾಗಿದ್ದ ಚಾಲಕ ಶ್ರೀಧರ್ ಮತ್ತು ನಯಾಜ್ ಎಂಬುವವರನ್ನು ಕಾರಿನ ಸಮೇತ ಅಹರಿಸಿ ಬೇಳೂರು ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಕುಣಿಗಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.