ಹುಬ್ಬಳ್ಳಿ, ಬೆಳಗಾವಿ: ರಾಜ್ಯದಲ್ಲಿ ಭಾನುವಾರ ಮಳೆ ಮುಂದುವರಿದ್ದು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದೆ. ಹುಬ್ಬಳ್ಳಿಯಲ್ಲಿ ಮಳೆ ಮಲೆನಾಡಿನ ಅನುಭವ ನೀಡಿದ್ದರೆ, ಬೆಳಗಾವಿಯಲ್ಲಿ ಮಳೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಭರ್ಜರಿ ಮಳೆ; ಮಲೆನಾಡಿನ ಅನುಭವ
ಹುಬ್ಬಳ್ಳಿ ವರದಿ: ಹುಬ್ಬಳ್ಳಿಯಲ್ಲಿ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭರ್ಜರಿ ಮಳೆ, ಮಲೆನಾಡಿನ ಅನುಭವ ಉಂಟು ಮಾಡಿದೆ. ಎದುರಿನ ರಸ್ತೆ ಕಣ್ಣಿಗೆ ಕಾಣದಷ್ಟು ಮಳೆ ಹನಿಗಳ ಅಬ್ಬರವಿತ್ತು.
ಸಂಚಾರಕ್ಕೆ ಅಡ್ಡಿ
ಬೆಳಗಾವಿ ವರದಿ: ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆ ಇನ್ನೂ ಮುಂದುವರೆದಿದೆ. ಇಲ್ಲಿನ ಹಿಂಡಲಗಾ ರಸ್ತೆ ಬಳಿ ಮರ ಉರುಳಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಹೊಸಪೇಟೆಯಲ್ಲಿ ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಮಧ್ಯಾಹ್ನದಿಂದ ಬಿರುಸಿನ ಮಳೆ ಬೀಳಲಾರಂಭಿಸಿದೆ. ದಾವಣಗೆರೆಯಲ್ಲಿ ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆ ಮುಂದುವರಿದಿದೆ. ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಅಂತಹ ಆತಂಕ ಇಲ್ಲ.