ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಆರ್ಎಸ್ಎಸ್ ಸಂಚು ರೂಪಿಸಿವೆ’ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘಟನೆ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಆರೋಪಿಸಿದ್ದಾರೆ.
‘ಮೋದಿ ಹತ್ಯೆ ಸಂಚು ಆರ್ಎಸ್ಎಸ್, ಗಡ್ಕರಿ ಹೆಣೆದಿರುವಂತಿದೆ. ಆ ಕಳಂಕವನ್ನು ಮುಸ್ಲಿಮರು ಮತ್ತು ಕಮ್ಯುನಿಸ್ಟರ ತಲೆಗೆ ಕಟ್ಟಿ, ನಂತರ ಮುಸ್ಲಿಮರನ್ನು ಕೊಲ್ಲುವುದು ಇದರ ಗುರಿ’ ಎಂದು ಶೆಹ್ಲಾ ಟ್ವೀಟ್ ಮಾಡಿದ್ದಾರೆ.
ರಾಜೀವ್ ಗಾಂಧಿಯನ್ನು ಕೊಂದ ರೀತಿಯಲ್ಲೇ ರೋಡ್ ಷೋ ನಡೆಸುವಾಗ ಮೋದಿಯನ್ನು ಹತ್ಯೆ ನಡೆಸಲು ಸಂಚು ಮಾಡಲಾಗಿದೆ. ನಕ್ಸಲರು ಪ್ರಕಾಶ್ ಎಂಬುವವರಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿ ಇದೆ ಎಂದು ಪುಣೆ ಪೊಲೀಸರು ಇತ್ತೀಚೆಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಶೆಹ್ಲಾ, ಟ್ವಿಟರ್ನಲ್ಲಿ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.