ತುಮಕೂರು: ‘ತುಮಕೂರು ಮಹಾನಗರ ಪಾಲಿಕೆಯು ಮೈದಾಳ ಕೆರೆ ಹೂಳೆತ್ತಿಸಬೇಕು. ಆ ಭಾಗದ ರೈತರಿಗೆ ಅನುಕೂಲವಾಗಲು ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದೇ ಇದ್ದರೆ ತುಮಕೂರಿಗೆ ಹನಿ ನೀರು ಬಿಡುವುದಿಲ್ಲ’ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಉರ್ಡಿಗೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮೈದಾಳ ಕೆರೆ ಅಭಿವೃದ್ಧಿಪಡಿಸುವ ಕುರಿತು ಈಗಾಗಲೇ ಪಾಲಿಕೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಕೆರೆಯಲ್ಲಿನ ಹೂಳು ತೆಗೆಸಲೇಬೇಕು ಎಂದು ಹೇಳಿದ್ದೇನೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಕಾಲು ಹಿಡಿದಾದರೂ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
‘ಹಿಂದಿನ ಶಾಸಕರು ಪಶುಪಾಲನಾ ಇಲಾಖೆಯಿಂದ ಹಸುಗಳ ವಿತರಣೆಗೆ ಫಲಾನುಭವಿ ಗುರುತಿಸಿ ಹಸುಗಳನ್ನು ಕೊಡಿಸುವಲ್ಲಿಯೂ ಅವ್ಯವಹಾರ ಮಾಡಿರುವುದು ಕ್ಷೇತ್ರದ ಜನರಿಗೆ ತಿಳಿದಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸಬೇಕು. ಫಲಾನುಭವಿಗಳನ್ನು, ರೈತರನ್ನು ಅಲೆದಾಡಿಸಿದರೆ ಕ್ರಮ ಎದುರಿಸಬೇಕಾ ಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುವರ್ಣಗಿರಿ ಕುಮಾರ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹರಳೂರು ಸುರೇಶ್, ಮುಖಂಡರಾದ ಹರಳೂರು ರುದ್ರೇಶ್, ವಿಜಯ್ ಕುಮಾರ್, ಗೋಪಾಲಕೃಷ್ಣ, ಮಾರ್ಕೆಟ್ ಕೃಷ್ಣಪ್ಪ ಇದ್ದರು.