ಕೊಪ್ಪ: ‘ಶಾಸಕತ್ವದ ಅವಧಿಯಲ್ಲಿ ನನಗೆ ಸಿಗುವ ಎಲ್ಲ ಸರ್ಕಾರಿ ಭತ್ಯೆಗಳನ್ನು ಸ್ವಂತಕ್ಕೆ ಬಳಸದೆ, ಪುತ್ರಿಯ ಹೆಸರಿನಲ್ಲಿ ಸ್ಥಾಪಿಸಿರುವ ‘ಸುಜನಾ ಚಾರಿಟಬಲ್ ಟ್ರಸ್ಟ್’ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ, ಕಷ್ಟದಲ್ಲಿದ್ದವರಿಗೆ ನೆರವು ಮುಂತಾದ ಜನ ಕಲ್ಯಾಣ ಕಾರ್ಯ ಕ್ರಮಗಳಿಗೆ ವಿನಿಯೋಗಿಸುತ್ತೇನೆ’ ಎಂದು ಶೃಂಗೇರಿ ಕ್ಷೇತ್ರದ ನೂತನ ಶಾಸಕ ಟಿ.ಡಿ. ರಾಜೇಗೌಡ ಘೋಷಿಸಿದರು.
ಬಾಳಗಡಿಯ ಒಕ್ಕಲಿಗರ ಸಮು ದಾಯ ಭವನದಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ‘ಸಂಭ್ರಮ ಸಂಕಲ್ಪ’ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಚುನಾವಣೆಯಲ್ಲಿ ಅತಂತ್ರ ಫಲಿ ತಾಂಶ ಬಂದಿದ್ದರಿಂದ ತಲೆದೋರಿದ ರಾಜಕೀಯ ಬೆಳವಣಿಗೆಗಳಿಂದಾಗಿ ವಿಜಯೋತ್ಸವ ಕೈಬಿಟ್ಟು ರಾಜ ಧಾನಿ ಸೇರಿ ಹಲವು ದಿನಗಳ ಕಾಲ ಅಲ್ಲೇ ಇರಬೇಕಾಯಿತು. ಬೆಂಗಳೂರು ತಲುಪುವುದು ಸ್ವಲ್ಪ ವಿಳಂಬವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ‘ಬಿಜೆಪಿ ತೆಕ್ಕೆಗೆ ಸೇರಿದ ರಾಜೇಗೌಡ’ ಎಂಬ ಅಪಪ್ರಚಾರ ನಡೆಸಲಾಯಿತು. ನಿಮ್ಮ ಬೆವರಿನ ಶ್ರಮದಿಂದ ಗಳಿಸಿದ ಈ ಸ್ಥಾನವನ್ನು ಬೇರೆಯವರಿಗೆ ಮಾರಾಟ ಮಾಡಲಾರೆ. ಬಿಜೆಪಿಯವರ ಅಪ ಪ್ರಚಾರ, ಹಣದ ಆಮಿಷವನ್ನು ಮೀರಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಋಣಿ ಯಾಗಿದ್ದೇನೆ’ ಎಂದರು.
‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 5 ವರ್ಷ ಪೂರ್ತಿ ಆಡಳಿತ ನಡೆಸುತ್ತದೆ. ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳಿಂದ ವಿಶ್ವಾಸ ದಲ್ಲಿ ಕೆಲಸ ಮಾಡಿಸುತ್ತೇನೆ. ತಪ್ಪು ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ‘ಪ್ರೀತಿ ವಿಶ್ವಾಸದ ರಾಜಕಾರಣ ಮಾಡಿದ ರಾಜೇಗೌಡರಿಗೆ ಗೆಲುವಾಗಿದೆ. ಇದನ್ನು ಸಹಿಸದ ಬಿಜೆಪಿಯವರು ಕೋಮು ಗಲಬೆ ಸೃಷ್ಟಿಸುವ ಹುನ್ನಾರ ನಡೆಸು ತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನತೆ ಅವ ಕಾಶ ನೀಡಬಾರದು. ಸಾಮಾಜಿಕ ಜಾಲತಾಣದಲ್ಲಿ ವ್ಯವಹರಿಸುವವರು ಹೊತ್ತಿಸುವ ಸಣ್ಣ ಕಿಡಿ ಸಮಾಜವನ್ನೇ ಸುಟ್ಟು ಬಿಡುತ್ತದೆ. ಈ ಬಗ್ಗೆ ಎಚ್ಚರಿಕೆ ಇರಲಿ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಮತ್ತು ಪುಷ್ಪಾ ರಾಜೇಗೌಡ ದಂಪತಿಯನ್ನು ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ ಪ್ರಸ್ತಾವನೆ ಮಾಡಿದರು. ಪಕ್ಷದ ಚುನಾ ವಣಾ ಉಸ್ತುವಾರಿ ಕಡ್ತೂರು ದಿನೇಶ್, ಮುಖಂಡರಾದ ಬಾಳೆಮನೆ ನಟರಾಜ್, ಅಸಗೋಡು ನಾಗೇಶ್, ಸಚಿನ್ ಮೀಗ, ಎಂ.ಆರ್. ಸುರೇಶ್ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್, ಮುಖಂ ಡರಾದ ಕೆ.ಜಿ. ಶೋಭಿಂತ್, ಕೆ.ಪಿ. ಅಂಶುಮಂತ್, ಕುಕ್ಕುಡಿಗೆ ರವೀಂದ್ರ, ಯು.ಎಸ್. ಶಿವಪ್ಪ, ಚನ್ನಗಿರಿ ಗೌಡ, ವಜ್ರಪ್ಪ, ಶಶಿಕುಮಾರ್, ಕೆ.ಪಿ.ಚಂದ್ರೇಗೌಡ, ಎಚ್.ಎಸ್.ಪ್ರವೀಣ್, ಅನ್ನಪೂರ್ಣ ನರೇಶ್, ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್, ಸುಬ್ರ ಹ್ಮಣ್ಯ ಶೆಟ್ಟಿ, ಡಿ.ಬಿ. ರಾಜೇಂದ್ರ, ಡಿ.ಎಸ್. ಸತೀಶ್, ಬೆಳಾಲೆ ಈಶ್ವರ್ ಇದ್ದರು.
‘ಸಂಭ್ರಮ ನಿಮ್ಮದು, ಸಂಕಲ್ಪ ನನ್ನದು’
‘ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋಲನ್ನು ಅನುಭವಿಸಿದರೂ ಧೃತಿಗೆಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಕಷ್ಟಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಈ ಬಾರಿ ನನ್ನ ಕೈಹಿಡಿದಿದ್ದಾರೆ. ಪಕ್ಷದ ಕಾರ್ಯಕರ್ತರು ನನ್ನ ಗೆಲುವಿಗಾಗಿ ಅವಿರತ ಶ್ರಮವಹಿಸಿದ್ದೀರಿ. ನಿಮ್ಮ ಸಹಾಯವನ್ನು ಎಂದಿಗೂ ಮರೆಯಲಾರೆ. ಈ ಸಂಭ್ರಮ ನಿಮ್ಮದು, ಸಂಕಲ್ಪ ಮಾತ್ರ ನನ್ನದು. ನೀವೆಲ್ಲ ಮತ ಕೇಳಲು ಹೋದಾಗ ನನ್ನ ಗೆಲುವಿಗಾಗಿ ಜನರಿಗೆ ಕೊಟ್ಟ ಮಾತನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.