ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹ, ವಿಲೇವಾರಿ ಸ್ಥಗಿತ

ನಗರಸಭೆ ಹೊರಗುತ್ತಿಗೆ ಪೌರ ಕಾರ್ಮಿಕರ ಸಂಬಳ ವಿಳಂಬ
Last Updated 11 ಜೂನ್ 2018, 9:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಹಲವು ಬಡಾವಣೆಗಳಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಪ್ರತಿದಿನ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಕಸ ಕೊಳೆತು ನಾರುತ್ತಿದೆ. ಹಂದಿ, ನಾಯಿ, ಸೊಳ್ಳೆಗಳ ವಾಸ ಸ್ಥಾನವಾಗಿ ಜನರಿಗೆ ರೋಗದ ಭಯ ಹುಟ್ಟಿಸುತ್ತಿದೆ..!

ನಗರಸಭೆಯ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಕೆಲವು ತಿಂಗಳಿಂದ ಸಂಬಳ ನೀಡಿಲ್ಲದಿರುವುದರಿಂದ ನಗರದ ಬೀದಿಗಳಲ್ಲಿ ಕಸದ ರಾಶಿ ಬಿದ್ದು ಗಬ್ಬುನಾರುವ ಸ್ಥಿತಿ ನಿರ್ಮಾಣವಾಗಿದೆ.

ನಗರಸಭೆಯಲ್ಲಿ ನೀರು ಸರಬರಾಜು ಹಾಗೂ ಸ್ವಚ್ಛತೆ ನಿರ್ವಹಣೆಗಾಗಿ 120 ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು.

ಈ ಹಿಂದೆ ಸರ್ಕಾರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ನಿರ್ಧಾರ ಪ್ರಕಟಿಸಿದ ನಂತರ ನಗರಸಭೆ ಯಿಂದ ಸಂಬಳ ನೀಡುವುದನ್ನು ತಡೆಹಿಡಿಯಲಾಗಿದೆ.

ಪೌರಕಾರ್ಮಿಕರು ಕೆಲಸ ನಿಲ್ಲಿಸಿರು ವುದರಿಂದ ನಗರದ ಬೀದಿಗಳಲ್ಲಿ ಕಸದ ರಾಶಿಗಳ ಸಂಖ್ಯೆ ಹೆಚ್ಚುತ್ತಿದ್ದು, ಗಬ್ಬು ವಾಸನೆ ಬೀರುತ್ತಿವೆ. ಬದಲಿ ವ್ಯವಸ್ಥೆ ರೂಪಿಸುವ ಜವಾಬ್ದಾರಿ ಹೊತ್ತಿರುವ ನಗರಸಭೆ ಅಸಹಾಯಕತೆ ಪ್ರದರ್ಶಿಸುತ್ತಿದೆ. ಒಂದು ವಾರದಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಕಸದ ರಾಶಿ ಬಿದ್ದಿರುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ.

ನಗರಸಭೆ ಹೊರಗುತ್ತಿಗೆ ನೌಕರರಿಗೆ ಮಾರ್ಚ್‌ವರೆಗೆ ಗುತ್ತಿಗೆದಾರರು ವೇತನ ನೀಡುತ್ತಿದ್ದರು. ಈಗ ಸರ್ಕಾರದ ಹೊಸ ಆದೇಶದಂತೆ ಟೆಂಡರ್ ಕೊಡುವಂತಿಲ್ಲ. ಇದರಿಂದಾಗಿ ಪೌರ ಕಾರ್ಮಿಕರು ಕಸ ತುಂಬುತ್ತಿಲ್ಲ. ಈ ಕುರಿತು ನಗರಸಭೆ ಸಿಬ್ಬಂದಿ ಗಮನಕ್ಕೆ ತಂದರೆ ಕಳಿಸುತ್ತೇವೆ ಎಂದು ಹೇಳುತ್ತಾರೆ. 15 ದಿನ ಕಳೆದರೂ ನಮ್ಮ ವಾರ್ಡಿನ ಕಸ ವಿಲೇವಾರಿ ಆಗಿಲ್ಲ. ಇದರಿಂದ ಜನರಿಗೆ ತೀವ್ರ ಸಮಸ್ಯೆಯಾಗಿದೆ ಎನ್ನುತ್ತಾರೆ ನಗರಸಭೆ ಸದಸ್ಯ ಭೀಮರಾಜ್.

ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು: ಇಲ್ಲಿನ ಹಲವು ಬಡಾವಣೆಗಳಲ್ಲಿ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಕೆಸರು ಉಂಟಾಗಿ ಪಾದಚಾರಿಗಳು ಬಿದ್ದು ಗಾಯ
ಗೊಂಡಿದ್ದಾರೆ. ಕೆಲವು ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬೀಳುವುದು ಸಾಮಾನ್ಯವಾಗಿದೆ.

ಸ್ಚಚ್ಛತೆಗೆ ಆದ್ಯತೆ ನೀಡಿ: ‘ಕಸದ ರಾಶಿ ಮತ್ತು ನೀರು ಒಂದೇ ಕಡೆ ಸಂಗ್ರಹವಾಗುವುದರಿಂದ ಸಾಂಕ್ರಾ ಮಿಕ ರೋಗ ಹರಡುವ ಸಾಧ್ಯತೆ ಇದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಸ್ವಚ್ಛತೆ ಕಾಪಾಡಿ ಕೊಂಡರೆ ಎಲ್ಲರೂ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು’ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್.

‘ಮನೆಯ ಮುಂಭಾಗದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಬಾರದು. ಜತೆಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳ ಸಭೆ ಕರೆದು ನಗರದ ಸ್ಚಚ್ಛತೆ ಕುರಿತು ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ’

ಹೊರಗುತ್ತಿಗೆ ನೌಕರರ ಏಪ್ರಿಲ್, ಮೇ ತಿಂಗಳ ಬಾಕಿ ಇದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ವೇತನ ಪಾವತಿಯಾಗಿಲ್ಲ. ಈ ತಿಂಗಳಲ್ಲಿ ವೇತನ ಪಾವತಿಸಲಾಗುತ್ತದೆ 
ಅಶೋಕ್, ಕಿರಿಯ ಆರೋಗ್ಯ ನೀರಿಕ್ಷಕ, ನಗರಸಭೆ      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT