ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಗಳು ನಿತ್ಯ

ಸ್ವಾಧ್ಯಾಯ
Last Updated 5 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ವೇದಗಳು ಅಪೌರುಷೇಯ. ಹೀಗೆಂದರೆ ಏನು ಎನ್ನುವುದನ್ನು ನೋಡುತ್ತಿದ್ದೇವೆ. ಸಾ. ಕೃ. ರಾಮಚಂದ್ರ ರಾವ್‌ ಈ ವಿಷಯದ ಬಗ್ಗೆ ಹೇಳಿರುವ ಮಾತುಗಳು ಉಲ್ಲೇಖಾರ್ಹವಾಗಿವೆ:

‘ನಾಲ್ಕು ವೇದಗಳು, ವೇದಶಾಖೆಗಳು, ಸಂಹಿತೆಯೇ ಮೊದಲಾದ ವಿಭಾಗಗಳು ಎನ್ನುವಾಗ ಅವೆಲ್ಲ ಗ್ರಂಥಗಳು; ಮೊದಲು ವಾಚೋವಿಧೇಯವಾಗಿದ್ದು ಅನಂತರ ಯಾವುದೋ ಕಾಲದಲ್ಲಿ ಬರಹದಲ್ಲಿ ಮೂಡಿಕೊಂಡವು. ಅವನ್ನು ಅನಾದಿನಿತ್ಯವೆಂದು ಹೇಳುವುದು ಹೇಗೆ? ವೇದವು ಪ್ರಮಾಣವೆನ್ನುವುದು, ಅಪೌರುಷೇಯವೆನ್ನುವುದು ಗ್ರಂಥಗಳನ್ನಲ್ಲ; ಭರ್ತೃಹರಿಯ ‘ವಾಕ್ಯಪದೀಯ’ ಇದನ್ನು ಎತ್ತಿತೋರಿಸುತ್ತದೆ.

‘ವೇದವಾಙ್ಮಯವನ್ನು ಆರ್ಷಸಂಪ್ರದಾಯವೆಂದು ಕರೆಯುತ್ತೇವೆ. ಋಷಿಗಳು ತಮ್ಮ ತಪಸ್ಸಿನಿಂದ, ಪ್ರತಿಭೆಯಿಂದ, ಅಲೌಕಿಕ ಅನುಭವದ ಫಲವಾಗಿ ಕಂಡುಕೊಂಡ, ಅನುಭವಕ್ಕೆ ತಂದುಕೊಂಡ, ತತ್ತ್ವಗಳನ್ನು ಮಾತಿನಲ್ಲಿ ಮೂಡಿಸಿದರು. ಬೇರೆಯವರಿಗೆ ತಿಳಿಯಹೇಳಿದರು. ಇದು ಅವರ ಯುಕ್ತಿಯ ಕೆಲಸವಲ್ಲ, ಬುದ್ಧಿಶಕ್ತಿಯ ಫಲವಲ್ಲ. ಮಂತ್ರಗಳನ್ನು ಅವರು ನೇರವಾಗಿ ಕಂಡುಕೊಂಡರೆಂದು ಪ್ರತೀತಿ. ಋಷಿಗಳು ಮಂತ್ರದ್ರಷ್ಟಾರರು, ಮಂತ್ರಕರ್ತೃಗಳಲ್ಲ. ವೇದವಾಙ್ಮಯವೆಂದರೆ ಯಾರೋ ಕೆಲವರು ಋಷಿಗಳ ರಚನೆಯಲ್ಲವೆಂಬ ಕಾರಣದಿಂದ ಅದು ಅಪೌರುಷೇಯ; ಪುರುಷಬುದ್ಧಿಯನ್ನು ಅವಲಂಬಿಸಿದ್ದಲ್ಲ.

‘ವೇದಮಂತ್ರಗಳಲ್ಲಿ ಅದಕ್ಕೆ ಕಾರಣನಾದವರೆಂದು ಋಷಿಗಳ ಹೆಸರುಗಳು ಬರುವುದಿಲ್ಲವೆ? ವೇದಶಾಖಾಕರ್ತೃಗಳೆಂದು ಕಠ, ಕುಥುಮ, ತಿತ್ತಿರಿ, ಪಿಪ್ಪಲಾದ ಮೊದಲಾದ ಮುನ್ನೂರು ಋಷಿಗಳಲ್ಲವೆ? ಹಾಗಿರುವಾಗ ವೇದವು ಅಪೌರುಷೇಯವೆನ್ನುವುದು ಹೇಗೆ? ಈ ಆಕ್ಷೇಪವನ್ನು ಜೈಮಿನಿಮಹರ್ಷಿಗಳೇ ಕಾಣಿಸಿದ್ದಾರೆ. ವೇದದ ಶಬ್ದ ಮತ್ತು ಅರ್ಥಗಳನ್ನು ಈ ಋಷಿಗಳು ಸೃಷ್ಟಿಮಾಡಲಿಲ್ಲ. ಅವರಿಗೆ ಮೊದಲೇ ಇದ್ದುವು. ಋಷಿಗಳಿಗೆ ಕಾಣಿಸಿಕೊಂಡ ತತ್ತ್ವ ಅನಾದಿನಿತ್ಯವಾದುದು, ಅವರ ಭಾವನೆಯ ಕೈಕೂಸಲ್ಲ. ಪತಂಜಲಿಗಳು ತಮ್ಮ ‘ವ್ಯಾಕರಣಮಹಾಭಾಷ್ಯ’ದಲ್ಲಿ ವೇದದ ಅರ್ಥವು ನಿತ್ಯ; ಆದರೆ ಅದನ್ನು ಬಣ್ಣಿಸುವ ಮಾತುಗಳು (ವರ್ಣಾನುಪೂರ್ವಿ) ಅನಿತ್ಯವೆಂದು ಹೇಳಿದ್ದಾರೆ.

‘ಅಪೌರುಷೇಯವಾದುದು ವೇದಗಳೆಂಬ ಗ್ರಂಥರಾಶಿಯಲ್ಲ, ಸಾಹಿತ್ಯವಲ್ಲ. ವೇದವೆಂಬ ಅಕ್ಷರರಾಶಿ, ವಾಙ್ಮಯ. ಋಷಿಗಳು ಬಳಸಿದ ಮಾತುಗಳು ಬೇರೆ ಬೇರೆಯಾದುದರಿಂದ ವೇದಶಾಖೆಗಳು ಬೇರೆಬೇರೆಯಾದವು. ಮಂತ್ರಗಳು ಋಷಿಗಳ ಹೆಸರಿನಲ್ಲೇ ಇವೆ. ಆದರೆ ಮಂತ್ರಕ್ಕೆ ಋಷಿಯು ಕಾರಣವೆನ್ನಲಾಗದು, ಅವನೊಂದು ನಿಮಿತ್ತ ಅಷ್ಟೇ. ಆದುದರಿಂದ ಮಂತ್ರದ ಮಾತೇ ಅರ್ಥಕ್ಕೆ ಆಧಾರ ಎನ್ನುವ ಹಾಗಿಲ್ಲ. ಇಲ್ಲಿನ ಶಬ್ದಾರ್ಥಸಂಬಂಧ ಲೌಕಿಕವಾದ ಮಾತಿಗಿರುವಂತೆ ಅಲ್ಲ, ವೇದಮಂತ್ರಗಳಿಗೆ ರಹಸ್ಯಾರ್ಥವಿದೆಯೆಂದು ಸಂಪ್ರದಾಯ ಹೇಳುತ್ತದೆ. ಋಕ್ಕುಗಳನ್ನು ನಾವು ‘ನಿನ್ಯಾನಿ’ (ರಹಸ್ಯಸ್ತೋತ್ರಗಳು) ಎಂದು ಕರೆಯುವುದು ಈ ಕಾರಣದಿಂದಲೇ. ನಿರುಕ್ತಕಾರರಾದ ಯಾಸ್ಕರಿಗೆ ಮೊದಲೇ ಶಾಕಪೂಣಿ ಮುಂತಾದವರು ವೇದಮಂತ್ರಗಳಲ್ಲಿರುವ ಅಪೌರುಷೇಯವಾದ ರಹಸ್ಯಾರ್ಥ ಏನೆಂಬುದನ್ನು ತಿಳಿಯಲು ಹೊರಟಿದ್ದರು. ಈಗ ಯಾಸ್ಕರ ನಿರುಕ್ತದ ನೆರವಿಲ್ಲದೆ ನಾವು ವೇದಮಂತ್ರಗಳ ಒಗಟನ್ನು ಬಿಡಿಸಲಾರೆವು.

‘ವೇದವಾಙ್ಮಯದಲ್ಲಿರುವ ಅಧಿಯಜ್ಞಾರ್ಥ, ಅಧಿದೈವತಾರ್ಥ ಮತ್ತು ಆಧ್ಯಾತ್ಮಿಕಾರ್ಥ – ಇವನ್ನು ತಿಳಿಯಬೇಕೆಂದರೆ ಆಯಾ ಭಾಷ್ಯಗ್ರಂಥಗಳನ್ನು ನೋಡಬೇಕಾಗುತ್ತದೆ. ಎಲ್ಲ ವೇದದಲ್ಲೂ ಈ ಮೂರು ತೆರನಾದ ಅರ್ಥಗಳಿವೆಯೆಂದು ಸಂಪ್ರದಾಯದ ವಿಶ್ವಾಸ. ಈ ಅರ್ಥಗಳನ್ನು ಅನ್ವೇಷಣೆಮಾಡುವಾಗ ವೇದಸಾಹಿತ್ಯವ್ನನೇ ಅವಲಂಬಿಸುವುದು ಸಹಜವೆ. ವೇದವಾಙ್ಮಯ ಆತ್ಮವಾದರೆ ವೇದಸಾಹಿತ್ಯ ಶರೀರ.’

(ಆಧಾರ: ವೇದವಾಙ್ಮಯ ಮತ್ತು ಉಪನಿಷತ್ತುಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT