ಲಂಡನ್: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಪಾನ್ನಲ್ಲಿರುವ ಚಿತಾಭಸ್ಮವನ್ನು ಭಾರತಕ್ಕೆ ತರುವಂತೆ ಅವರ ಮಗಳು ಅನಿತಾ ಬೋಸ್–ಫಫ್ ಒತ್ತಾಯಿಸಿದ್ದಾರೆ.
ನೇತಾಜಿ ನಿಗೂಢ ಸಾವಿನ ರಹಸ್ಯ ಕುರಿತು ಪತ್ರಕರ್ತ ಆಶಿಶ್ ರೇ ಬರೆದಿರುವ ‘ಲೇಡ್ ಟು ರೆಸ್ಟ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಜನಸಾಮಾನ್ಯರಷ್ಟೇ ಏಕೆ ನಮ್ಮ ಹತ್ತಿರದ ಸಂಬಂಧಿಗಳು, ಹಿತೈಷಿಗಳು ಕೂಡ ನೇತಾಜಿ ಅವರ ಸಾವನ್ನು ಸುಲಭವಾಗಿ ನಂಬಲು ತಯಾರಿಲ್ಲ. ನಿಗೂಢತೆಯನ್ನು ಇಷ್ಟಪಡುವುದು ಮನುಷ್ಯನ ಸಹಜ ಗುಣ’ ಎಂದು ಅವರು ವಿಶ್ಲೇಷಿಸಿದ್ದಾರೆ.
‘ಯಾವುದೇ ವಿವಾದ, ರಾಜಕೀಯಕ್ಕೆ ಆಸ್ಪದ ನೀಡದೆ ನೇತಾಜಿ ಚಿತಾಭಸ್ಮವನ್ನು ಭಾರತಕ್ಕೆ ತರುವುದೊಂದೇ ನಾವು ಅವರಿಗೆ ಸಲ್ಲಿಸಬಹುದಾದ ಬಹು ದೊಡ್ಡ ಗೌರವ. ಅವರ ಸಾವಿನ ಸುತ್ತ ಮನೆಮಾಡಿರುವ ಅನುಮಾನಗಳಿಗೆ ತೆರೆ ಎಳೆದು, ಆ ವಿಷಯವನ್ನು ಇಲ್ಲಿಗೆ ಮುಗಿಸುವುದು ಒಳ್ಳೆಯದು’ ಎಂದು ಫಫ್ ಸಲಹೆ ಮಾಡಿದ್ದಾರೆ.
ನೇತಾಜಿ ಸಾವಿನ ಸುತ್ತ ಇರುವ ಅನುಮಾನಗಳಿಗೆ ತೆರೆ ಎಳೆಯಲು ಅವರು ಯತ್ನಿಸಿದ್ದು, 11 ವಿಭಿನ್ನ ತನಿಖಾ ವರದಿಗಳನ್ನು ತಾಳೆ ಹಾಕಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.