ಮೈಸೂರು: ಎಚ್.ಡಿ.ಕೋಟೆ, ನಂಜನ ಗೂಡು, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಯಿತು. ಎಚ್.ಡಿ.ಕೋಟೆ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಬಿರುಸಿನ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಕುಸಿದ ಗೋಡೆ: ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸತೊರವಳ್ಳಿ ಗ್ರಾಮದಲ್ಲಿ ಪುಟ್ಟಮ್ಮ ಎಬುವವರ ಮನೆ ಗೋಡೆ ಕುಸಿದಿದೆ. ಅಲ್ಲದೇ ಬೆಳಗನಹಳ್ಳಿ ಗ್ರಾಮದಲ್ಲಿ ದೇವಪ್ಪ ಮತ್ತು ಭೈರೇಗೌಡ ಎಂಬುವವರ ಜಮೀನಿನಲ್ಲಿದ್ದ ಬಾಳೆ ಗಿಡಗಳು ನೆಲಕಚ್ಚಿವೆ.
ಭಾನುವಾರ ಮತ್ತು ಸೋಮವಾರ ಬಿಡುವಿಲ್ಲದೇ ಮಳೆ ಸುರಿಯುತ್ತಿರುವುದರಿಂದ ಕೆಲ ಜಮೀನುಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನಿಂತಿದ್ದು ಬೆಳೆಗಳು ಕೊಳೆಯುವ ಭೀತಿ ರೈತರಲ್ಲಿ ಉಂಟಾಗಿದೆ. ಅಲ್ಲದೇ ಜೋರಾಗಿ ಹರಿದ ನೀರಿನಿಂದ ಕೆಲವು ರೈತರ ಹತ್ತಿ ಬೆಳೆ ಕೊಚ್ಚಿ ಹೋಗಿದೆ. ಮೈಸೂರು ನಗರದಲ್ಲಿ ಸೋಮವಾರ ತುಂತುರು ಮಳೆಯಾಯಿತು.
ಧಾರಾಕಾರ ಮಳೆ
ಸರಗೂರು: ತಾಲ್ಲೂಕಿನ ಕಂದಲಿಕೆ ಹೋಬಳಿಯಲ್ಲಿ ಜಡಿ ಮಳೆ ಸುರಿಯುತ್ತಿದ್ದ ಕಾರಣ ಕಂದಲಿಕೆ ಹೋಬಳಿಯ ಬಿ.ಮಟಕೆರೆ, ಬಂಕವಾಡಿ, ಹೀರೆಹಳ್ಳಿ, ಮೊಳೆಯೂರು, ಎಂ.ಸಿ.ತಳಲು, ಚಿಕ್ಕಬರಗಿ, ದೊಡ್ಡಬರಗಿ, ಕಾಡಬೇಗೂರು, ಕಾಳನಹುಂಡಿ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಪಟ್ಟಣದಲ್ಲಿ ಸೋಮವಾರ ಬೆಳಿಗ್ಗಿನಿಂದ ಧಾರಾಕಾರ ಮಳೆ ಸುರಿದ ಕಾರಣ ಜನಜೀವನ ಅಸ್ತವ್ಯಸ್ತವಾಗಿತ್ತು. ಶಾಲೆಯಿಂದ ಮನೆಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದರು. 31.04 ಮಿಲಿ ಮೀಟರ್ ಮಳೆಯಾಗಿದೆ.