ವಿವೇಕ ಶಾನಭಾಗ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಸಂಪತ್ ಬೆಟ್ಟಗೆರೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ (ವಾ.ವಾ., ಜೂನ್ 11) ಇಷ್ಟವಾಯಿತು.
ನಾನು ಆಕಾಶವಾಣಿಯ ನಿರೂಪಕಿಯಾಗಿ ದಿನವೂ ರೇಡಿಯೊ ಮುಖಾಂತರ ಮಕ್ಕಳಿಗೆ ಹಲವಾರು ಕಥೆಗಳನ್ನು ತಲುಪಿಸುತ್ತೇನೆ. ಮಕ್ಕಳಿಗೆ ಕಥೆ ಹೇಳುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ.
ಹ್ಯಾರಿ ಪಾಟರ್ ಯಾರು, ಛೋಟಾ ಭೀಮ್ ಯಾರು ಎಂದು ಕೇಳಿದರೆ ಥಟ್ ಅಂತ ಉತ್ತರ ಕೊಡುವ ಮಕ್ಕಳು, ಲಕ್ಷ್ಮಣ ಯಾರು, ಭರತ, ಶತ್ರುಘ್ನರು ಯಾರು, ರಾಮ– ಸೀತೆಯರು ಯಾರು? ಎಂದೋ, ಪಾಂಡವರು, ಕೌರವರ ಬಗ್ಗೆಯೋ ಕೇಳಿದರೆ ಉತ್ತರಿಸುವುದಿಲ್ಲ.
ಇದಕ್ಕೆ ಕಾರಣ ನಾವೇ. ಮಕ್ಕಳಿಗಾಗಿ ದಿನಕ್ಕೆ ಕನಿಷ್ಠ ಐದು ನಿಮಿಷಗಳನ್ನು ಮೀಸಲಿಟ್ಟು, ರಾಮಾಯಣ, ಮಹಾಭಾರತದ ಕಥೆ– ಉಪಕಥೆಗಳು, ನೀತಿ ಕಥೆಗಳು, ತೆನಾಲಿರಾಮ, ಅಕ್ಬರ್ ಬೀರಬಲ್, ಪಂಚತಂತ್ರ ಅಥವಾ ವಿಕ್ರಂ ಬೇತಾಳನ ಕಥೆಗಳನ್ನಾಗಲಿ ಹೇಳುತ್ತಾ ಬಂದರೆ ಅವರಲ್ಲಿ ಕಥೆ ‘ಕೇಳುವ ಕೌಶಲ’ ಬೆಳೆಯುತ್ತದೆ.
ಅವರಿಗೂ ಕಥೆಗಳನ್ನು ಕೇಳ್ತಾ ಕಥೆ ಹೇಳುವ ಮನಸ್ಸಾಗುವುದು. ಅವರಲ್ಲಿ ಸಭಾ ಕಂಪನ ದೂರವಾಗುವುದು. ಕಥೆ ಹೇಳುವಲ್ಲಿ ಮುಂದೇನಾಗುವುದು ಎನ್ನುವ ಕುತೂಹಲ ಅವರಲ್ಲಿ ಉಂಟಾಗುವುದು. ಆದರೆ, ಅವರಂತೆ ನಾವೂ ಮಕ್ಕಳಾಗಿ ಕಥೆ ಹೇಳಿದಾಗ ಮಾತ್ರ.