ನವದೆಹಲಿ (ಎಎಫ್ಪಿ): ಸ್ಕಾರ್ಫ್ (ಶಿರೋವಸ್ತ್ರ) ಧರಿಸಿಕೊಂಡೇ ಆಡಬೇಕು ಎಂದು ನಿರ್ಬಂಧ ಹೇರಿದ್ದಕ್ಕೆ ಬೇಸರಗೊಂಡು ಭಾರತದ ಚೆಸ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಇರಾನ್ನಲ್ಲಿ ನಡೆಯಲಿರುವ ಏಷ್ಯನ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.
ವಿಶ್ವದ ಜೂನಿಯರ್ ಬಾಲಕಿಯರ ಚಾಂಪಿಯನ್ ಆಗಿದ್ದ ಸೌಮ್ಯ ‘ಜುಲೈ 27ರಿಂದ ಆಗಸ್ಟ್ ನಾಲ್ಕರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಇರಾನ್ನ ವಸ್ತ್ರ ಸಂಹಿತೆ ನನ್ನ ಮೂಲಭೂತ ಹಕ್ಕುಗಳನ್ನು ನಿಷೇಧಿಸುವಂತಿದೆ. ಹೀಗಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳದೇ ಇರುವುದೇ ನನ್ನ ಮುಂದೆ ಇರುವ ಏಕೈಕ ಮಾರ್ಗ’ ಎಂದು ಹೇಳಿದ್ದಾರೆ.
‘ಅಧಿಕೃತ ಟೂರ್ನಿಗಳಲ್ಲಿ ರಾಷ್ಟ್ರ ವನ್ನು ಪ್ರತಿನಿಧಿಸುವ ಪೋಷಾಕು ಧರಿಸುವಂತೆ ಹೇಳುವುದಿದೆ. ಆದರೆ ಧಾರ್ಮಿಕ ಆಚರಣೆಯನ್ನು ಸಂಘಟಕರು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.