ನವದೆಹಲಿ: ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ವರದಿ ಜುಲೈ ಅಂತ್ಯದೊಳಗೆ ಹೊರಬೀಳುವ ವಿಶ್ವಾಸವನ್ನು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ವ್ಯಕ್ತಪಡಿಸಿದ್ದಾರೆ.
ಗುರುವಾರ ತಮ್ಮನ್ನು ಇಲ್ಲಿ ಭೇಟಿ ಮಾಡಿದ್ದ ಮಹದಾಯಿಗಾಗಿ ಮಹಾ ವೇದಿಕೆ ಮತ್ತು ಸಹ್ಯಾದ್ರಿ ಜಲಜನ ಸೊಸೈಟಿಯ ನಿಯೋಗದ ಮುಂದೆ ಅವರು ಈ ವಿಶ್ವಾಸ ಪ್ರಕಟಿಸಿದ್ದಾರೆ.
ಒಂದು ವೇಳೆ ಜುಲೈ ತಿಂಗಳ ಒಳಗಾಗಿ ಅಂತಿಮ ವರದಿ ಹೊರಬೀಳದಿದ್ದರೆ ಆಗಸ್ಟ್ ಒಂದರಂದು ನಿಯೋಗ ಪುನಃ ತಮ್ಮನ್ನು ಭೇಟಿ ಮಾಡಿ ಪ್ರಶ್ನಿಸಬಹುದು ಎಂದು ಗಡ್ಕರಿ ತಮಗೆ ಹೇಳಿರುವುದಾಗಿ ವೇದಿಕೆ ಮತ್ತು ಸೊಸೈಟಿಯ ಪದಾಧಿಕಾರಿಗಳಾದ ಶಂಕ್ರಪ್ಪ ಅಂಬಲಿ ಮತ್ತು ಡಾ.ರಂಗನಾಥ ಅವರು ಸುದ್ದಿಗಾರರಿಗೆ ತಿಳಿಸಿದರು.
ಧಾರವಾಡ- ಗದಗ-ಬಾಗಲಕೋಟೆ-ಬೆಳಗಾವಿ ಜಿಲ್ಲೆಗಳ ಒಂಬತ್ತು ತಾಲ್ಲೂಕುಗಳ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರ ಎಲ್ಲ ಸಂಘಗಳನ್ನು ಮಹದಾಯಿಗಾಗಿ ಮಹಾವೇದಿಕೆ ಪ್ರತಿನಿಧಿಸಿದೆ. 2015ರ ಜುಲೈ 16ರಿಂದ ಇಲ್ಲಿಯವರೆಗೆ ನಿರಂತರ ನಡೆದಿರುವ ಮಹದಾಯಿ ಹೋರಾಟ ಇಂದಿಗೆ 1065ನೇ ದಿನ ಪ್ರವೇಶಿಸಿದೆ.