ಸಿಂದಗಿ (ವಿಜಯಪುರ ಜಿಲ್ಲೆ): ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ. ಮನಗೂಳಿ ಅವರು ಗೆದ್ದರೆ ಮಾತ್ರ ಚಪ್ಪಲಿ ಹಾಕುವುದಾಗಿ ಶಪಥ ಮಾಡಿದ್ದ ಅಭಿಮಾನಿಯೊಬ್ಬರಿಗೆ, ತೋಟಗಾರಿಕಾ ಸಚಿವ ಮನಗೂಳಿ ಅವರು ಹೊಸ ಚಪ್ಪಲಿ ಕೊಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ತಾಲ್ಲೂಕಿನ ಬ್ಯಾಕೋಡ ಗ್ರಾಮದ ಬಸವಪ್ರಭಯ್ಯ ಮಠ, ‘ಮನಗೂಳಿ ಗೆದ್ದರೆ ಚಪ್ಪಲಿ ಧರಿಸುವೆ; ಇಲ್ಲದಿದ್ದರೆ ಬರಿಗಾಲಿನಲ್ಲೇ ನಡೆದಾಡುವೆ’ ಎಂದು ಶಪಥ ಮಾಡಿದ್ದರು. ಚುನಾವಣೆಗೆ 2 ತಿಂಗಳು ಮೊದಲೇ ಚಪ್ಪಲಿ ತ್ಯಜಿಸಿದ್ದರು.
ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಮಠ ಅವರಿಗೆ ಸ್ವತಃ ಸಚಿವರೇ ಚಪ್ಪಲಿ ನೀಡಿದಾಗ, ‘ಇದು ಮನಗೂಳಿ ಅವರು ಜನರ ಮೇಲೆ ಇಟ್ಟಿರುವ ಅಭಿಮಾನ ತೋರಿಸುತ್ತದೆ‘ ಎಂದು ಸಂತಸ ವ್ಯಕ್ತಪಡಿಸಿದರು.