ಬೆಂಗಳೂರು: ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರಿಗೆ ‘ಡಾ.ಎನ್.ಎಂ. ಮಹಮ್ಮದ್ ಆಲಿ ದತ್ತಿ ಪ್ರಶಸ್ತಿ’ ನೀಡಲು ಕೇರಳ ಗೆಜೆಟೆಡ್ ಅಧಿಕಾರಿಗಳ ಸಂಘ (ಕೆ.ಜಿ.ಒ.ಎ) ನಿರ್ಧರಿಸಿದೆ ಎಂದು ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ತಿಳಿಸಿದ್ದಾರೆ.
ಕೇರಳದ ಸರ್ಕಾರಿ ನೌಕರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಎನ್.ಎಂ. ಮಹಮ್ಮದ್ ಆಲಿ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಜನಪ್ರಿಯ ವೈದ್ಯರಾಗಿದ್ದ ಅವರು ಕೋಮು ಸೌಹಾರ್ದತೆಗಾಗಿಯೂ ಶ್ರಮಿಸಿದ್ದಾರೆ.
2016ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ₹50 ಸಾವಿರ. ಇದೇ 22ರಂದು ತಿರುವನಂತಪುರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.