ಪಟ್ನಾ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಮತ್ತು ಚುಡಾಯಿಸುವ ಬೀದಿ ಕಾಮಣ್ಣರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರುವ ಮೊದಲು ರಾಜಭವನಕ್ಕೆ ದೂರು ನೀಡುವಂತೆ ಬಿಹಾರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸಲಹೆ ಮಾಡಿದ್ದಾರೆ.
ಪ್ರಕರಣಗಳನ್ನು ಆಲಿಸಲು ರಾಜಭವನ ಸಹಾಯವಾಣಿ ಆರಂಭಿಸಿದ್ದು, ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಯಾವುದೇ ಮೂಲೆಯಿಂದಾಗಲಿ ವಿದ್ಯಾರ್ಥಿನಿಯರು ದೂರವಾಣಿ ಮೂಲಕ ಸಹಾಯವಾಣಿಗೆ ದೂರು ಸಲ್ಲಿಸಬಹುದು. ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಹಿಡಿದು ಎಫ್ಐಆರ್ ದಾಖಲಿಸುವವರೆಗೆ ಸಂತ್ರಸ್ತರಿಗೆ ರಾಜಭವನದ ಅಧಿಕಾರಿಗಳು ನೆರವು ನೀಡಲಿದ್ದಾರೆ ಎಂದು ಅವರು ಅಭಯ ನೀಡಿದ್ದಾರೆ.
ಪಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘ ಶುಕ್ರವಾರ ಆಯೋಜಿಸಿದ್ದ ‘ಬಿಹಾರ ರಾಜಕೀಯದಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹೆಚ್ಚಿರುವ ಲೈಂಗಿಕ ಕಿರುಕುಳ, ದೌರ್ಜನ್ಯ, ಚುಡಾಯಿಸುವಿಕೆ ಪ್ರಕರಣಗಳ ಬಗ್ಗೆ ಸತ್ಯಪಾಲ್ ಮಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ಸತ್ಯಪಾಲ್ ಅವರೂ ಕೂಡ ವಿದ್ಯಾರ್ಥಿ ಚಳವಳಿಗಳಿಂದ ರಾಜಕೀಯ ಪ್ರವೇಶಿಸಿದವರು.