ಔರಾದ್: ತಾಲ್ಲೂಕಿನ ರೈತರು ಅರಣ್ಯ ಕೃಷಿ ಕಡೆ ಹೆಚ್ಚಿನ ತೋರುತ್ತಿದ್ದು, ರೈತರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಇಲ್ಲಿಯ ನರ್ಸರಿಯಲ್ಲಿ ವಿವಿಧ ತಳಿಯ 3 ಲಕ್ಷ ಸಸಿಗಳು ಬೆಳೆಸಲಾಗಿದೆ.
‘ತಾಲ್ಲೂಕಿನಲ್ಲಿ ಈ ವರ್ಷ 30 ಸಾವಿರ ಶ್ರೀಗಂಧ ಬೆಳೆಸಲು ಗುರಿ ಇಟ್ಟುಕೊಳ್ಳಲಾಗಿದೆ. ಅಕನಾಪುರ ಗ್ರಾಮದ ರೈತರು 11 ಸಾವಿರ ಶ್ರೀಗಂಧದ ಸಸಿ ಖರೀದಿ ಮಾಡಿದ್ದಾರೆ. ಒಂದು ಸಸಿಗೆ ₹ 3 ದರ ನಿಗದಿ ಮಾಡಲಾಗಿದೆ. ನಾಟಿ ಮಾಡಿದ ಪ್ರತಿ ಸಸಿಗೆ ಪೋಷಣೆ ಮಾಡಲು ₹14 ಸಹಾಯಧನ ಕೊಡಲಾಗುತ್ತದೆ' ಎಂದು ಉಪ ವಲಯ ಅರಣ್ಯಾಧಿಕಾರಿ ಹಾವಪ್ಪ ಶೆಂಬೆಳ್ಳಿ ತಿಳಿಸಿದ್ದಾರೆ.
'ಈಗಾಗಲೇ ತಾಲ್ಲೂಕಿನ ಹಲವು ರೈತರು ಹೆಬ್ಬೇವು ಸಸಿ ನಾಟಿ ಮಾಡಿದ್ದಾರೆ. ಈ ವರ್ಷ ಮತ್ತೆ 21 ಸಾವಿರ ಹೆಬ್ಬೇವಿನ ಸಸಿಗಳಿಗೆ ಬೇಡಿಕೆ ಇದೆ. 4 ಸಾವಿರ ಹೊಂಗೆ, 4 ಸಾವಿರ ನೇರಳೆ, 3 ಸಾವಿರ ಇಪ್ಪೆ, 2 ಸಾವಿರ ಅರಳಿ, 3 ಸಾವಿರ ಮಾವಿನ ಸಸಿ ವಿತರಿಸಲಾಗುವುದು' ಎಂದಿದ್ದಾರೆ.
ಹೆಬ್ಬೇವು, ಶ್ರೀಗಂಧ ಬೆಳೆಸಲು ತಾಲ್ಲೂಕಿನಲ್ಲಿ ಉತ್ತಮ ಮಣ್ಣು ಹಾಗೂ ಹವಾಗುಣ ಇದೆ. ಅರಣ್ಯ ಕೃಷಿಗೆ ಮುಂದೆ ಬರುವ ರೈತರಿಗೆ ಇಲಾಖೆಯಿಂದ ನೆರವು ಕೊಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಿರೇಶ ಕಲ್ಯಾಣಿ ಹೇಳಿದರು.