ಕೋಲ್ಕತ್ತ: ಮುಸ್ಲಿಮರನ್ನು ಓಲೈಸುತ್ತೇನೆಂದು ನನ್ನನ್ನು ಹೀಗಳೆಯುವವರು ಹಿಂದೂಗಳಿಗಾಗಲಿ, ಮುಸ್ಲಿಮರಿಗಾಗಲಿ ಯಾರಿಗೂ ಸ್ನೇಹಿತರಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಈದ್ ಉಲ್ ಫಿತ್ರ್ ಅಂಗವಾಗಿ ಶನಿವಾರ ಇಲ್ಲಿನ ರೆಡ್ ರೋಡ್ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು.
‘ಹಿಂದೂ ಸಮುದಾಯವನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂದರ್ಥವೇ? ನಾನು ಎಲ್ಲ ಧರ್ಮದವರನ್ನೂ ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇನೆ. ಎಲ್ಲರೂ ಈ ದೇಶಕ್ಕೆ ಸೇರಿದವರು’ ಎಂದು ಹೇಳಿದರು.
ಈ ಮೊದಲು ಈದ್ ಹಬ್ಬದಂದು ನವದೆಹಲಿಯಲ್ಲಿ ಸಭೆ ನಿಗದಿಪಡಿಸಿದ್ದ ನೀತಿ ಆಯೋಗ, ತಮ್ಮ ವಿರೋಧದ ಬಳಿಕ ಅದನ್ನು ಮುಂದೂಡಿದ್ದಾಗಿ ಅವರು ಹೇಳಿದರು.
‘ಈದ್ ಇರುವುದು ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಅದೇ ದಿನ ಅವರು ಸಭೆ ನಿಗದಿಪಡಿಸುವ ಅಗತ್ಯವೇನಿತ್ತು’ ಎಂದು ಮಮತಾ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯನ್ನು ಮೊದಲು ಶನಿವಾರಕ್ಕೆ (ಜೂನ್ 16) ನಿಗದಿಪಡಿಸಲಾಗಿತ್ತು. ಈದ್ನಲ್ಲಿ ಪಾಲ್ಗೊಳ್ಳಬೇಕಾದ್ದರಿಂದ ಸಭೆಯಲ್ಲಿ ಭಾಗವಹಿಸಲು ಮಮತಾ ಮತ್ತು ಕೆಲವು ಮುಖ್ಯಮಂತ್ರಿಗಳು ಅಸಮ್ಮತಿ ವ್ಯಕ್ತಪಡಿಸಿದ ಬಳಿಕ, ಅದನ್ನು ಮರುದಿನಕ್ಕೆ ಮುಂದೂಡಲಾಯಿತು.