ಮುಂಬೈ: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ನಿರ್ಧಾರವು ಈಗ ಫಲ ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
‘ಬಚ್ಚಿಟ್ಟಿದ್ದ ಹಣವು ಈಗ ಉತ್ಪಾದನಾ ಉದ್ದೇಶಕ್ಕೆ ಸದ್ಬಳಕೆ ಆಗುತ್ತಿದೆ. ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ನಿರುಪಯುಕ್ತವಾಗಿದ್ದ ಹಣ ಈಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. ಈ ಹಣವನ್ನು ಈಗ ದೇಶದ ಅಭಿವೃದ್ಧಿ ಉದ್ದೇಶಕ್ಕೆ ಬಳಸಲಾಗುತ್ತಿದೆ’ ಎಂದು ಕೇಂದ್ರದ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಹೇಳಿದ್ದಾರೆ.
ನೋಟು ರದ್ದತಿಯ ಆರಂಭಿಕ ದಿನಗಳಲ್ಲಿ ಜನರು ತೀವ್ರ ಸಂಕಷ್ಟ ಎದುರಿಸಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಅವರು, ಸರ್ಕಾರ ಕೂಡ ಟೀಕೆಗೆ ಗುರಿಯಾಗಿತ್ತು. ಈ ನಿರ್ಧಾರವು ಸರ್ಕಾರದ ವೈಫಲ್ಯವಲ್ಲ ಎಂದು ಅವರು ಪುನರುಚ್ಚರಿಸಿದರು.
‘ಕಪ್ಪು ಹಣವು ಈಗ ಜನ ಧನವಾಗಿ (ಜನರ ಸಂಪತ್ತಾಗಿ) ಮಾರ್ಪಟ್ಟಿದೆ’ ಎಂದೂ ಶುಕ್ಲಾ ಹೇಳಿದರು. ವಿಮೆ ಕುರಿತ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.