ಉಡುಪಿ: ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಇದೇ 21ರಂದು 4ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ ಎಂದು ಕೇಂದ್ರದ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಹೇಳಿದರು.
ಪೇಜಾವರ ಮಠದಲ್ಲಿ ಶನಿವಾರ ಗೋಸ್ವಾಲ್ ಫೌಂಡೇಷನ್ ಹಮ್ಮಿಕೊಂಡಿದ್ದ ‘ಕಾಸ್ಮೊ ಥೆರಪಿ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಅವರು ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.
ಈ ಯೋಗ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾಲ್ವರು ಸಾಧಕರಿಗೆ ಈ ಬಾರಿ ಪ್ರಧಾನಮಂತ್ರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದೇಶ ಹಾಗೂ ವಿದೇಶಗಳ ತಲಾ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎಂದರು.
ಆಯುಷ್ ಇಲಾಖೆಯು ಯೋಗ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದು, ಪ್ರತಿ ಜಿಲ್ಲೆಯಲ್ಲೂ ₹ 14 ಕೋಟಿ ವೆಚ್ಚದಲ್ಲಿ ಒಂದು ಆಯುಷ್ ಆಸ್ಪತ್ರೆಯನ್ನು ತೆರೆಯಲಾಗುತ್ತಿದೆ. ಈಗಾಗಲೇ 100 ಆಸ್ಪತ್ರೆಗಳ ಕಾಮಗಾರಿ ನಡೆಯುತ್ತಿದೆ. ಮುಂದಿನ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಜತೆಗೆ, ಪ್ರತಿಯೊಂದು ರಾಜ್ಯದ ಪ್ರಮುಖ ನಗರಗಳಲ್ಲಿ 100 ಯೋಗ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ವರ್ಷ ಹೊಸದಾಗಿ 150 ಪಾರ್ಕ್ಗಳನ್ನು ನಿರ್ಮಾಣ ಮಾಡಲಾಗುವುದು. ಜನರಿಗೆ ಯೋಗದ ಮಹತ್ವ ತಿಳಿಸಲು ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.
ಹೊರ ರಾಷ್ಟ್ರಗಳಲ್ಲಿ 28 ಯೋಗ ಮಾಹಿತಿ ಕೇಂದ್ರಗಳನ್ನೂ ತೆರೆಯುವ ಚಿಂತನೆಯಿದೆ. ಜಾಗತಿಕ ಮಟ್ಟದಲ್ಲಿ ಯೋಗ ಶಿಕ್ಷಣದ ಅಧ್ಯಯನ ಹಾಗೂ ಪ್ರಚಾರ ಸಂಬಂಧ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಆಯುಷ್ ಇಲಾಖೆ ಒಪ್ಪಂದ ಮಾಡಿಕೊಂಡಿದೆ ಎಂದು ಸಚಿವರು ಹೇಳಿದರು.