ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಈದ್‌ ಉಲ್‌ ಫಿತ್ರ್‌ ಸಂಭ್ರಮ

ನಗರದ ವಿವಿಧೆಡೆ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ; ಶುಭ ಕೋರಿದ ರಾಜಕೀಯ ಪಕ್ಷಗಳ ಮುಖಂಡರು
Last Updated 17 ಜೂನ್ 2018, 10:23 IST
ಅಕ್ಷರ ಗಾತ್ರ

ಕೋಲಾರ: ಭಾವೈಕ್ಯದ ಸಂಕೇತ ಹಾಗೂ ಹಸಿವಿನ ಮಹತ್ವ ಸಾರುವ ಈದ್‌ ಉಲ್‌ ಫಿತ್ರ್‌ ಹಬ್ಬದ ಆಚರಣೆಯು ನಗರದಲ್ಲಿ ಶನಿವಾರ ಕಳೆಗಟ್ಟಿತು. ತಿಂಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಮರು ಸಂಭ್ರಮದಿಂದ ಹಬ್ಬ ಆಚರಿಸಿದರು.

ಶ್ವೇತ ವರ್ಣದ ಹೊಸ ಬಟ್ಟೆ ತೊಟ್ಟು ನಗರದ ಹೊರವಲಯದ ಸಂಗೊಂಡಹಳ್ಳಿ ಮೈದಾನ ಹಾಗೂ ಕ್ಲಾಕ್ ಟವರ್ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳ ಮಿನಾರುಗಳಲ್ಲಿ ಪ್ರಾರ್ಥನೆಯ ದನಿ ಮೊಳಗಿತು.

ಧಾರ್ಮಿಕ ಮುಖಂಡರು, ಸಮುದಾಯದ ಹಿರಿಯರು ಮತ್ತು ಮಕ್ಕಳು ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪುಟ್ಟ ಮಕ್ಕಳು ಪರಸ್ಪರ ಆಲಂಗಿಸಿ ಶುಭಾಶಯ ಕೋರಿದರು. ಮಹಿಳೆಯರು ಮನೆಗಳಲ್ಲೇ ಪ್ರಾರ್ಥನೆ ಮಾಡಿ ಅಲ್ಲಾಹು ಸ್ಮರಿಸಿದರು.

ಮಸೀದಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದರ್ಗಾ ಶಾಹಿ ಮೊಹಲ್ಲಾ ಹಿಂಭಾಗದ ಕುತುಬ್‌ ಗೋರಿ ಮಸೀದಿ, ದರ್ವೇಶಿ ಮೊಹಲ್ಲಾದ ಸರ ಇ ಮಸೀದಿ, ಸೈಯದಾನ ಬಿ ದರ್ಗಾ, ಶಾಹಿ ಲತೀಫಾ ಭಾನು ಮಸೀದಿ, ನಮತ್ ಬಿ ಮಸೀದಿ, ಮಹಮ್ಮದ್‌ ನೂರಿ ಮಸೀದಿ, ಶಾಬಾ ಷಾ ಖಲಂದರ್‌ ಮಸೀದಿ, ಷರಿಯಾ ಮಸೀದಿ, ಬಾರ್ಲೈನ್‌ ಮಸೀದಿ, ಬಿಲಾಲ್ ಮಸೀದಿ, ಖಾನ್‌ ಸಾಬ್‌ ಮಸೀದಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಚಾರ ನಿರ್ಬಂಧ: ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಿದ್ದ ಕಾರಣ ಕೋಲಾರ– ಬೆಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮೈದಾನದೊಳಗೆ ಜಾಗ ಸಾಲದ ಕಾರಣ ಮೈದಾನದ ಹೊರಗಿನ ರಸ್ತೆ, ಕ್ಲಾಕ್‌ ಟವರ್‌ ಮೇಲ್ಸೇತುವೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು.

ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮುಸ್ಲಿಮರ ಅಂಗಡಿಗಳು ಮುಚ್ಚಿದ್ದವು. ಆಟೊ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ದರ್ಗಾಗಳು, ಮುಸ್ಲಿಂ ಜನವಸತಿ ಇರುವ ಬಡಾವಣೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಧಾರ್ಮಿಕ ಸಂದೇಶ: ಸಾಮೂಹಿಕ ಪ್ರಾರ್ಥನೆ ಬಳಿಕ ಧಾರ್ಮಿಕ ಸಂದೇಶ ನೀಡಿದ ಮೌಲ್ವಿಗಳು, ‘ಬಡತನ ಯಾವುದೇ ಧರ್ಮ ಅಥವಾ ಜಾತಿಗೆ ಸಿಮೀತವಾಗಿಲ್ಲ. ಆಯಾ ಧರ್ಮದಲ್ಲಿನ ಸ್ಥಿತಿವಂತರು ಬಡವರಿಗೆ ನೆರವು ನೀಡಿದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. -ಶಾಂತಿ ಸೌರ್ಹಾದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಸಹೋದರರಂತೆ ಬಾಳಬೇಕು. ದೇಶದ ಏಕತೆ ಮತ್ತು ಘನತೆ ಕಾಪಾಡಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ, ನಿವೃತ್ತ ಐಎಎಸ್‌ ಅಧಿಕಾರಿ ಜಮೀರ್‌ ಪಾಷಾ, ಜಿಲ್ಲಾ ಅಂಜುಮಾನ್ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಜಮೀರ್ ಅಹಮ್ಮದ್‌, ಕಾರ್ಯದರ್ಶಿ ಸೈಫುಲ್ಲಾ, ಸದಸ್ಯರಾದ ಇರ್ಫಾನ್‌, ಇಮ್ರಾನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅತಾವುಲ್ಲಾ ಖಾನ್‌, ನಗರಸಭಾ ಸದಸ್ಯ ಸಾದಿಕ್‌ ಪಾಷಾ, ವಕ್ಫ್ ಬೋರ್ಡ್‌ ಮಾಜಿ ಅಧ್ಯಕ್ಷರಾದ ಇಕ್ಬಾಲ್‌ ಅಹಮ್ಮದ್, ಸಾಬೀರ್‌ ಪಾಷಾ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ವಿಶೇಷ ತಿಂಡಿ ತಿನಿಸು

ಮನೆಗಳಲ್ಲಿ ಕೋಳಿ ಹಾಗೂ ಕುರಿ ಮಾಂಸದ ವಿಶೇಷ ತಿಂಡಿ ತಿನಿಸು ತಯಾರಿಸಲಾಗಿತ್ತು. ಬಿರಿಯಾನಿ, ಕುಷ್ಕಾ, ಕಬಾಬ್‌, ರೋಟಿ ಮಾಂಸದ ಘಮಲು ಎಲ್ಲೆಲ್ಲೂ ಹರಡಿತ್ತು. ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳ ಬಳಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಹಬ್ಬದೂಟ ಸವಿದರು. ಬಡ ಜನರಿಗೆ ದಿನಸಿ, ಹೊಸ ಬಟ್ಟೆ ಹಾಗೂ ತಿಂಡಿ ತಿನಿಸುಗಳನ್ನು ದಾನ ಮಾಡಲಾಯಿತು.

ಸಾಮೂಹಿಕ ಮೆರವಣಿಗೆ

ಮಾಲೂರು: ಪಟ್ಟಣದ ದೊಡ್ಡ ಕೆರೆ ಬಳಿಯ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಮಹಾರಾಜ ವೃತ್ತ, ಡೊಡ್ಡ ಪೇಟೆ, ಬಾಲಾಜಿ ವೃತ್ತದ ಮೂಲಕ ಮೆರವಣಿಗೆ ಸಾಗಿದರು. ಶಾಸಕ ಕೆ.ವೈ. ನಂಜೇಗೌಡ ಪ್ರಾರ್ಥನೆಯಲ್ಲಿ ಭಾಗವಹಿಸಿ ಶುಭ ಕೋರಿದರು.

ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಎ.ಆಯಾಜ್ ಪಾಷಾ, ಮುಖಂಡರಾದ ಶಬ್ಬೀರ್, ಅಜಮತ್ ಖಾನ್ , ಮೆಹಬೂಬ್ ಖಾನ್, ನಯಾಜ್, ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮಿನಾರಾಯಣ್, ಪುರಸಭಾ ಸದಸ್ಯ ಮುರಳೀಧರ್, ಹುಂಗೇನಹಳ್ಳಿ ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಧುಸೂದನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT