ಯಲ್ಲಾಪುರ: ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಬೇಕಾಗಿದ್ದ 108 ಆಂಬುಲೆನ್ಸ್ ಸ್ವತಃ ದುಃಸ್ಥಿತಿಯನ್ನು ತಲುಪಿದೆ. ತಾಲ್ಲೂಕಿನಲ್ಲಿ ಎರಡು ಆಂಬುಲೆನ್ಸ್ ಇದ್ದು ಒಂದು ಯಲ್ಲಾಪುರ ಹಾಗೂ ಮತ್ತೊಂದು ಗುಳ್ಳಾಪುರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುಳ್ಳಾಪುರದ ಆಂಬುಲೆನ್ಸ್ ಉತ್ತಮ ಸ್ಥಿತಿಯಲ್ಲಿದೆ. 2008ರಿಂದ ಕಾರ್ಯನಿರ್ವಹಿಸುತ್ತಿರುವ ಯಲ್ಲಾಪುರದ ಆಂಬುಲೆನ್ಸ್ ಸ್ಥಿತಿ ಶೋಚನೀಯವೆನಿಸಿದೆ.
ವಾಹನದ ಮೇಲ್ಭಾಗ ಸಂಪೂರ್ಣ ಹಾಳಾಗಿದ್ದು, ಮಳೆ ನೀರೆಲ್ಲ ಒಳಗಡೆ ಬರುತ್ತಿದೆ. ಇದರಿಂದ ರೋಗಿಗಳ ಮೈಮೇಲೆ ನೀರು ಬಿಳುತ್ತಿದೆ. ಹಿಂಭಾಗದ ಬಾಗಿಲು ತಾನಾಗಿಯೇ ತೆರೆದುಕೊಳ್ಳಲಿದೆ.
ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿರುವುದರಿಂದ ದಿನನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇರುತ್ತದೆ. ಅಲ್ಲದೇ ಅನಾರೋಗ್ಯ ಬಾಧೆಗೊಳಗಾದ ರೋಗಿಗಳನ್ನು ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಅಗತ್ಯವಿದೆ. ಅದಕ್ಕಾಗಿ ಇದನ್ನು ಗುತ್ತಿಗೆ ಪಡೆದ ಜಿ.ವಿ.ಕೆ. ಕಂಪನಿಯು ಹೊಸ ಆಂಬುಲೆನ್ಸ್ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈಗಿರುವ ಆಂಬುಲೆನ್ಸ್ಅನ್ನು ಬದಲಾಯಿಸುವುದರಿಂದ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ನಾಯ್ಕ ಹೇಳುತ್ತಾರೆ.
ಹಳೆಯದಾದ ಆಂಬುಲೆನ್ಸ್ ಬದಲಾಯಿಸಲು ಸಂಬಂಧಿಸಿದ ಕಂಪನಿಗೆ ನಿರ್ದೇಶನ ನೀಡಿ, ಹೊಸ ಆಂಬುಲೆನ್ಸ್ ನೀಡುವಂತೆ ಸೂಚಿಸುತ್ತೇನೆ
- ಶಿವರಾಮ ಹೆಬ್ಬಾರ, ಶಾಸಕ