ವಿರಾಜಪೇಟೆ: ಅಂತರರಾಷ್ಟ್ರೀಯ ಹಾಕಿ ಆಟಗಾರ ಮೇಕೆರಿರ ನಿತಿನ್ ತಿಮ್ಮಯ್ಯ ಅವರ ನಿಶ್ಚಿತಾರ್ಥವು ಮದ್ರೀರ ವಿಷ್ಮಾ ಚಂಗಪ್ಪ ಅವರೊಂದಿಗೆ ಭಾನುವಾರ ನೆರವೇರಿತು. ಇಲ್ಲಿನ ಖಾಸಗಿ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಉಂಗುರ ಬದಲಾಯಿಸಿಕೊಂಡರು.
ವಿಷ್ಮಾ ಅವರು ನಿತಿನ್ಗೆ ಪೀಚೆ ಕತ್ತಿಯನ್ನು ಉಡುಗೆಗೆ ತೊಡಿಸುವ ಮೂಲಕ ನಿಶ್ಚಿತಾರ್ಥದ ಸಂಪ್ರದಾಯ ನೆರವೇರಿಸಿದರು. ವಿಷ್ಮಾ ಕೊಡವ ಉಡುಗೆಯಲ್ಲಿ ಮಿಂಚಿದರೆ, ನಿತಿನ್ ಸೂಟ್ ಧರಿಸಿದ್ದರು.
ಹಾಕಿ ಕೂರ್ಗ್ ಉಪಾಧ್ಯಕ್ಷ ಮೇಕೆರಿರ ರವಿ ಪೆಮ್ಮಯ್ಯ ಅವರ ಪುತ್ರ ನಿತಿನ್. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ ವಿಷ್ಮಾ, ಶ್ರೀಮಂಗಲ ವಿದ್ಯಾಸಂಸ್ಥೆ ಅಧ್ಯಕ್ಷ ಮದ್ರೀರ ವಿಷ್ಣು ಚಂಗಪ್ಪ ಅವರ ಪುತ್ರಿ. ವಿರಾಜಪೇಟೆ ಸಮೀಪದ ಬಾಳುಗೋಡಿನ ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕೃತಿಕ ಕೇಂದ್ರದಲ್ಲಿ ಡಿ.25ರಂದು ವಿವಾಹ ನಡೆಸಲು ಎರಡು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ನಿಶ್ಚಿತಾರ್ಥದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಎಸ್. ರಘುನಾಥ್, ಎಸ್.ಕೆ. ಉತ್ತಪ್ಪ, ನಿಖಿನ್ ತಿಮ್ಮಯ್ಯ, ವಿ.ಎಸ್. ವಿನಯ್, ಪುಲಿಯಂಡ ತಿಮ್ಮಣ್ಣ, ಕರಿನೆರವಂಡ ಸೋಮಣ್ಣ, ಬುಟ್ಟಿಯಂಡ ಚಂಗಪ್ಪ, ಬಲ್ಲಚಂಡ ಲೆನ್ ಅಯ್ಯಪ್ಪ, ಓಮನ್ ದೇಶದ ಹಾಕಿ ತರಬೇತುದಾರ ಕೂತಂಡ ಪೂಣಚ್ಚ ಪಾಲ್ಗೊಂಡಿದ್ದರು.