ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಕದನ ವಿರಾಮ ಅಂತ್ಯಗೊಳಿಸಿದ್ದಾಗಿ ಘೋಷಿಸಿ ಒಂದು ಗಂಟೆಯೊಳಗೆ ಆಗಂತುಕನೊಬ್ಬ ಹಾರಿಸಿದ ಗುಂಡಿಗೆ 45ರ ಹರೆಯದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಭಾನುವಾರ ಗೃಹ ಸಚಿವರು ಕದನ ವಿರಾಮ ಅಂತ್ಯ ಘೋಷಿಸಿದ್ದರು. ಸಂಜೆ ವೇಳೆ ಇಲ್ಲಿನ ಕುಲ್ಗಾಂ ಜಿಲ್ಲೆಯಲ್ಲಿ ಆಗಂತುಕನೊಬ್ಬ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿನ ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ನೌಕರರಾಗಿರುವ ಇಕ್ಬಾಲ್ ಖವಾಕ್ ಮನೆಗೆ ನುಗ್ಗಿದ ಉಗ್ರರು ಗುಂಡು ಹಾರಾಟ ನಡೆಸಿದ್ದರು. ಆದಾಗ್ಯೂ ಖವಾಕ್ ಮೇಲೆ ಉಗ್ರರು ಯಾಕೆ ದಾಳಿ ಮಾಡಿದ್ದಾರೆ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ ಎಂದು ಕುಲ್ಗಾಂ ಎಸ್ಪಿ ಹರ್ಮೀತ್ ಸಿಂಗ್ ಹೇಳಿದ್ದಾರೆ.
ಕಳೆದ ಒಂದು ವಾರದಲ್ಲಿ ಕಾಶ್ಮೀರದಲ್ಲಿ 12 ಮಂದಿ ಗುಂಡಿಗೆ ಬಲಿಯಾಗಿದ್ದಾರೆ.