ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ :11 ಸದಸ್ಯರ ಪ್ರಮಾಣ ಸ್ವೀಕಾರ

Last Updated 18 ಜೂನ್ 2018, 17:28 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಹೊಸದಾಗಿ ಆಯ್ಕೆಯಾಗಿರುವ 11 ಸದಸ್ಯರಿಗೆ ಸೋಮವಾರ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಪ್ರಮಾಣ ವಚನ ಬೋಧಿಸಿದರು.

ಬಿಜೆಪಿಯ ರಘುನಾಥ ಮಲ್ಕಾಪುರೆ, ಎಸ್‌.ರುದ್ರೇಗೌಡ, ಎನ್‌.ರವಿಕುಮಾರ್‌, ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ಅರವಿಂದ ಕುಮಾರ್‌ ಅರಳಿ, ಕೆ. ಹರೀಶ್‌ ಕುಮಾರ್‌, ಕೆ. ಗೋವಿಂದರಾಜ್‌, ಜೆಡಿಎಸ್‌ನ ಬಿ.ಎಂ.ಫಾರೂಕ್‌ ಮತ್ತು ಎಸ್‌.ಎಲ್‌.ಧರ್ಮೇಗೌಡ ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೃಷ್ಣ ಭೈರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನಿಂದ ನಿವೃತ್ತಿ ಹೊಂದಿದ ರಾಮಚಂದ್ರಗೌಡ, ಸಿ. ಮೋಟಮ್ಮ, ಅಮರನಾಥ ಪಾಟೀಲ, ಸೋಮಣ್ಣ ಬೇವಿನ ಮರದ, ಎಂ.ಡಿ.ಲಕ್ಷ್ಮೀನಾರಾಯಣ ಮತ್ತು ರಮೇಶ್‌ ಬಾಬು ಅವರನ್ನು  ಬೀಳ್ಕೊಡಲಾಯಿತು.

ರಮೇಶ್‌ ಬಾಬು ಅಸಮಾಧಾನ: ‘ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಕರೆಯದೇ ಇರಲು ಕಾರಣವೇನು’ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ರಮೇಶ್‌ ಬಾಬು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರನ್ನು ಪ್ರಶ್ನಿಸಿದ್ದಾರೆ.

‘ಸಿದ್ಧಾಂತದ ಅನುಗುಣವಾಗಿ ಈ ಕಾರ್ಯಕ್ರಮ ನಡೆಯುವುದಾಗಿದ್ದರೆ. ನಾನು ಕಾರ್ಯಕ್ರಮದಿಂದ ದೂರ ಉಳಿಯುತ್ತಿದೆ. ಸದನದ ಸದಸ್ಯನಾಗಿದ್ದಾಗ ಯಾರ ಭಾವನೆಗಳಿಗೆ ನೋವು ಉಂಟು ಮಾಡದೇ ಕಾರ್ಯ ನಿರ್ವಹಿಸಿದ್ದೇನೆ. ಇಂದು ಏನು ನಡೆಯಿತೋ ಅದನ್ನು ನಿಮ್ಮ ವಿವೇಚನೆ ಬಿಡುತ್ತೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ರಮೇಶ್‌ ಬಾಬು ಅವರು ಸಭೆಗೆ ತಡವಾಗಿ ಬಂದಿದ್ದರು. ಅವರು ಬರುವುದಕ್ಕೆ ಮೊದಲೇ ಸಭೆಯಲ್ಲಿ ಹಾಜರಿದ್ದ ನಿವೃತ್ತ ಸದಸ್ಯರ ಪಟ್ಟಿಯನ್ನು ಸಭಾಪತಿಯವರಿಗೆ ನೀಡಲಾಗಿತ್ತು. ಆ ಪ್ರಕಾರವೇ ಅವರು ಪಟ್ಟಿ ಓದಿದರು. ರಮೇಶ್‌ ಬಾಬು ಸಭೆಗೆ ಬಂದಿರುವುದು ಗೊತ್ತಾದ ತಕ್ಷಣವೇ ಅವರನ್ನು ವೇದಿಕೆಗೆ ಕರೆದೆವು. ಇದರಲ್ಲಿ ದುರುದ್ದೇಶವಿಲ್ಲ’ ಎಂದು ವಿಧಾನ ಪರಿಷತ್‌ ಸಚಿವಾಲಯದ ಮೂಲಗಳು ತಿಳಿಸಿವೆ.

‘ ಈ ಕಾರ್ಯಕ್ರಮವನ್ನು ಆಯೋಜಿಸಿದವರು ಪರಿಷತ್‌ ಸಚಿವಾಲಯ. ಇದರಲ್ಲಿ ಪ್ರಮಾಣ ವಚನ ಬೋಧಿಸುವುದು ಮಾತ್ರ ನನ್ನ ಕೆಲಸವಾಗಿತ್ತು. ಸಭಾಪತಿ ಕಚೇರಿ ಆಯೋಜಿಸಿದ ಕಾರ್ಯಕ್ರಮ ಅಲ್ಲ’ ಎಂದು ಸಭಾಪತಿ ಶಂಕರಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT