ಮಹಿಳೆಯೊಬ್ಬರು ಶ್ರೀರಾಮನ ಚಿತ್ರವಿರುವ ಬ್ಯಾನರ್ ಮೇಲೆ ಮೊಟ್ಟೆ ಎಸೆಯುತ್ತಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ (ಔರಂಗಾಬಾದ್) ಈ ಘಟನೆ ನಡೆದಿದೆ. ದರ್ಗಾ ರಸ್ತೆಯ ಮಧ್ಯದ ಚೌಕವೊಂದರಲ್ಲಿ ಹಾಕಲಾಗಿರುವ ಶ್ರೀರಾಮನ ಬ್ಯಾನರ್ ಬಳಿಗೆ ತೆರಳುವ ಮಹಿಳೆ ಮೊಟ್ಟೆ ಎಸೆದು ವಾಪಸಾಗುತ್ತಾಳೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ‘ಈ ಮುಸ್ಲಿಂ ಮಹಿಳೆಗೆ ಶ್ರೀರಾಮನನ್ನು ಕಂಡರೆ ಏಕಿಷ್ಟು ಕೋಪ? ಇಷ್ಟೊಂದು ವಿಷ ತುಂಬಿಕೊಂಡಿದ್ದಾದರೂ ಹೇಗೆ’? ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಮಹಿಳೆ ಮುಸ್ಲಿಂ ಸಮುದಾಯದವಳಲ್ಲ.
ಬ್ಯಾನರ್ ಮೇಲೆ ಮೊಟ್ಟೆ ಎಸೆದ ಮಹಿಳೆ ಶಿಲ್ಪಾ ರಾಮರಾಜ್ ಗರುಡ್ ಅಲಿಯಾಸ್ ಶೈಲಜಾ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ ಎಂದು ಸಂಭಾಜಿ ನಗರ ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ಅವರು ಹೇಳಿದ್ದಾರೆ ಎಂದು ‘ದಿ ಲಾಜಿಕಲ್ ಇಂಡಿಯನ್’ ವೆಬ್ಸೈಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆ ಅಂಚೆಕಚೇರಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಕೌಟುಂಬಿಕ ವ್ಯಾಜ್ಯದ ಕಾರಣಕ್ಕೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ ಎಂದು ಠಾಣೆಯ ಟ್ವಿಟರ್ ಖಾತೆಯಲ್ಲಿ ವಿವರಿಸಲಾಗಿದೆ. ಆದರೆ, ಮೊಟ್ಟೆ ಎಸೆದಿದ್ದು ಮುಸ್ಲಿಂ ಸಮುದಾಯದ ಮಹಿಳೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ದಿ ಲಾಜಿಕಲ್ ಇಂಡಿಯನ್’ ತಿಳಿಸಿದೆ.