‘ಕರ್ನಾಟಕದಲ್ಲಿ ಮುಸ್ಲಿಮರ ಮೇಲೆ ಈಗ ನಿಯಂತ್ರಣವೇ ಇಲ್ಲದಂತಾಗಿದೆ. ಕಾಂಗ್ರೆಸ್ ಚುನಾವಣೆಯನ್ನು ಗೆದ್ದಿದೆಯಷ್ಟೇ, ಇನ್ನೂ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿಲ್ಲ. ಆಗಲೇ ಮುಸ್ಲಿಮರು ಎಷ್ಟು ದೌರ್ಜನ್ಯ ನಡೆಸುತ್ತಿದ್ದಾರೆ’ ಎಂಬ ವಿವರ ಇರುವ ಟ್ವೀಟ್ ಮೇ 16ರಂದು ಪ್ರಕಟವಾಗಿದೆ. ಅಂದಿನಿಂದ ಆ ಟ್ವೀಟ್ನ ಸ್ಕ್ರೀನ್ಶಾಟ್ಗಳು ಮತ್ತು ಲಿಂಕ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಸ್ಲಿಂ ವ್ಯಕ್ತಿಯೊಬ್ಬರು, ಪೊಲೀಸ್ ಅಧಿಕಾರಿಯೊಬ್ಬರ ಜತೆಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವನ್ನೂ ಟ್ವೀಟ್ ಜತೆಗೆ ಹಂಚಿಕೊಳ್ಳಲಾಗಿದೆ. ಆದರೆ, ಈ ಟ್ವೀಟ್ನಲ್ಲಿ ಇರುವ ವಿವರ ಸುಳ್ಳು.
ಇದು ಕರ್ನಾಟಕಕ್ಕೆ ಸಂಬಂಧಿಸಿದ ವಿಡಿಯೊ ಅಲ್ಲ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ಇದು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ಛೋಪಡಾ ಪಟ್ಟಣದಲ್ಲಿ ನಡೆದ ಘಟನೆ. 2021ರ ಮಾರ್ಚ್ 18ರಂದು ಈ ಘಟನೆ ನಡೆದಿತ್ತು. ಛೋಪಡಾ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ವಾಗ್ವಾದ ನಡೆದಿತ್ತು. ಆಗಲೂ ವಿಡಿಯೊ ಬಗ್ಗೆ ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು. ಈಗ ಮತ್ತೆ ಮಾಹಿತಿಯನ್ನು ತಿರುವಿ, ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ’ ಎಂದು ಫ್ಯಾಕ್ಟ್ಚೆಕ್ನಲ್ಲಿ ವಿವರಿಸಲಾಗಿದೆ.