ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಿಲುಕಿರುವ ಅಸ್ಸಾಂ ರಾಜ್ಯದ ಜನರಿಗೆ ನೆರವು ನೀಡಲು ಹಾಗೂ ಅವರನ್ನು ರಾಜ್ಯಕ್ಕೆ ವಾಪಸ್ಸು ಕರೆ ತರಲು ಪೊಲೀಸ್ ತಂಡವೊಂದನ್ನು ಕಳುಹಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಸಿಂಗ್ ಸೋಮವಾರ ಹೇಳಿದ್ದಾರೆ.
ಇಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಣಿಪುರದಲ್ಲಿ ನೆಲೆಸಿರುವ ಅಸ್ಸಾಂನ ಹೆಚ್ಚಿನ ಜನರು ಹಿಂತಿರುಗಲು ಸಿದ್ಧರಿಲ್ಲ. ಆದರೆ ಹಿಂತಿರುಗಲು ಬಯಸುವ ಜನರಿಗೆ ವಿಮಾನ ನಿಲ್ದಾಣಕ್ಕೆ ತಲುಪಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಐಜಿಪಿ ಮಟ್ಟದ ಅಧಿಕಾರಿಯ ನೇತೃತ್ವದ ಪೊಲೀಸ್ ತಂಡವೊಂದು ಈಗಾಗಲೇ ನೆರೆಯ ರಾಜ್ಯಕ್ಕೆ ತಲುಪಿದೆ ಎಂದು ಸಿಂಗ್ ಹೇಳಿದ್ದಾರೆ.
ಕಳೆದ ವಾರ ಮಣಿಪುರದಲ್ಲಿ ಹಿಂಸಾಚಾರ ನಡೆದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಣಿಪುರದಲ್ಲಿ ತಂಗಿರುವ ಅಸ್ಸಾಂನ ಜನರಿಗೆ ಎಲ್ಲಾ ನೆರವು ನೀಡುವಂತೆ ಸೂಚನೆ ನೀಡಿದ್ದರು.
ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಮಣಿಪುರದಲ್ಲಿ ಬುಧವಾರ ಮೈತೇಯಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಬೇಕೆಂದು ಪ್ರತಿಭಟನೆ ಆಯೋಜಿಸಿದ ನಂತರ ಘರ್ಷಣೆಗಳು ನಡೆದಿದ್ದು, ಕನಿಷ್ಠ 54 ಜನರ ಸಾವಿಗೆ ಕಾರಣವಾಯಿತು.
ರಾಜಧಾನಿ ಇಂಫಾಲ್ನಲ್ಲಿ ಸೋಮವಾರ ಬೆಳಗ್ಗೆ ಕೆಲವು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದ್ದರಿಂದ ಮಣಿಪುರದಲ್ಲಿ ಜನಜೀವನ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.