ಮಲಪ್ಪುರಂ: ಅತ್ಯಂತ ಕ್ರೂರ ಕೃತ್ಯವೊಂದರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಬಳಿ ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್ನ ಹಿಂದೆ ಕಟ್ಟಿ ಹಾಕಿ ರಸ್ತೆಯಲ್ಲಿ ಏಳೆದಾಡಿದ ಘಟನೆ ನಡೆದಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಒಂದು ಕಿ.ಮೀ.ಗೂ ಹೆಚ್ಚು ದೂರ ನಾಯಿಯನ್ನು ಬೈಕ್ನ ಹಿಂದೆ ಕಟ್ಟಿ ಹಾಕಿ ಎಳೆದಾಡಿದ್ದಾನೆ ಎಂದು ವರದಿಯಾಗಿದೆ.
ಅದೇ ಹಾದಿಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಈ ಕ್ರೂರ ವಿಡಿಯೊವನ್ನು ಸೆರೆ ಹಿಡಿದಿದ್ದಾನೆ. ಅಲ್ಲದೆ ಈ ಕುರಿತು ಪ್ರಶ್ನೆ ಮಾಡಿದಾಗ, ರಸ್ತೆಯಲ್ಲಿ ನಾಯಿ ಸತ್ತು ಬಿದ್ದಿರುವುದನ್ನು ಕಂಡು ಅದನ್ನು ಮುಟ್ಟಲು ಇಷ್ಟಪಡದ ಕಾರಣ ಬೈಕ್ ಹಿಂದೆ ಕಟ್ಟಿ ಹೋಗುತ್ತಿದ್ದೇನೆ ಎಂದು ಆ ವ್ಯಕ್ತಿ ಸಮಜಾಯಿಸಿ ನೀಡಿದ್ದಾನೆ.
ಈ ಘಟನೆಯು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದು, ಕೇರಳದಲ್ಲಿ ಪ್ರಾಣಿಗಳ ವಿರುದ್ಧ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಅಲ್ಲದೆ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಈ ವಿಡಿಯೊ ಆಧಾರದಲ್ಲಿ ಕೇರಳ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.