ಲಖನೌ: ಅದಾನಿ ಸಮೂಹವು ಹಣಕಾಸು ಅಕ್ರಮ ಎಸಗಿದೆ ಎಂದು ‘ಹಿಂಡನ್ಬರ್ಗ್ ರಿಸರ್ಚ್’ ಮಾಡಿರುವ ಆರೋಪಗಳ ಕುರಿತ ಸಂಶಯಗಳನ್ನು ಕೇಂದ್ರ ಸರ್ಕಾರವು ಬಗೆಹರಿಸಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಶನಿವಾರ ಆಗ್ರಹಿಸಿದ್ದಾರೆ.
‘ಕಳೆದೆರಡು ದಿನಗಳಿಂದ ‘ಹಿಂಡನ್ಬರ್ಗ್ ರಿಸರ್ಚ್’ನ ವರದಿ ಮತ್ತು ಷೇರು ಮಾರುಕಟ್ಟೆಯ ಮೇಲಿನ ಪರಿಣಾಮಗಳ ಕುರಿತು ಗಣರಾಜ್ಯೋತ್ಸವಕ್ಕಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ. ದೇಶದ ಕೋಟ್ಯಂತರ ಜನರು ಕಷ್ಟಪಟ್ಟು ದುಡಿದ ಹಣವೂ ಇದರಲ್ಲಿ ಸೇರಿದೆ. ಆದರೆ ಸರ್ಕಾರವು ಮೌನವಾಗಿದೆ’ ಎಂದೂ ಹೇಳಿದ್ದಾರೆ.
‘ಈ ಸಮೂಹದಲ್ಲಿ ಸರ್ಕಾರ ಮಾಡಿರುವ ಬೃಹತ್ ಹೂಡಿಕೆ ಏನಾಗಲಿದೆ ಎಂಬುದರ ಬಗ್ಗೆ ಜನರು ಚಿಂತಿತರಾಗಿದ್ದಾರೆ. ಆರ್ಥಿಕತೆ ಏನಾಗಲಿದೆ? ಎಂಬ ಅವರ ಆತಂಕ ಸಹಜವಾದದ್ದು. ಇದಕ್ಕೆ ಪರಿಹಾರ ಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸರ್ಕಾರ ಹೇಳಿಕೆ ನೀಡುವ ಮೂಲಕ ಜನರ ಚಿಂತೆಯನ್ನು ಪರಿಹರಿಸಬೇಕು ಎಂದಿದ್ದಾರೆ.
‘ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ’ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್ಬರ್ಗ್ ರಿಸರ್ಚ್’ ಈಚೆಗೆ ಆರೋಪಿಸಿತ್ತು.