ನವದೆಹಲಿ: ‘ಲಿಂಗಾಯತ ಹಾಗೂ ಪರಿಶಿಷ್ಟ ಸಮುದಾಯದಂಥ ಪ್ರಬಲ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದಲ್ಲಿ ಯಾವುದೇ ಪ್ರಮುಖ ಹುದ್ದೆ ನೀಡಿಲ್ಲ. ಅಂತಿಮವಾಗಿ ಭ್ರಷ್ಟಾಚಾರ ಗೆದ್ದಿದೆ‘ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಗುರುವಾರ ಟೀಕಿಸಿದ್ದಾರೆ.
‘ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಕರ್ನಾಟಕದ ದಕ್ಷಿಣ ಭಾಗದವರು. ಲಿಂಗಾಯತ ಸಮುದಾಯದ ನಾಯಕರಾದ ಎಂ.ಬಿ. ಪಾಟೀಲ, ದಲಿತ ಸಮುದಾಯದ ನಾಯಕರಾದ ಜಿ. ಪರಮೇಶ್ವರ ಅವರಿಗೆ ಬೇಕೆಂದೇ ಉಪಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ನೀಡಿಲ್ಲ’ ಎಂದರು.
‘ಏಕೈಕ ಉಪಮುಖ್ಯಮಂತ್ರಿಯಾದ, ಹಣದಲ್ಲಿ ದೊಡ್ಡಕುಳವಾಗಿರುವ ಶಿವಕುಮಾರ್ ಅವರೇ ಎಲ್ಲವನ್ನೂ ನಿಯಂತ್ರಿಸಲಿದ್ದಾರೆ. ಹೆಚ್ಚಿನ ಖಾತೆಗಳನ್ನು ಶಿವಕುಮಾರ್ ಅವರ ಆಪ್ತರಿಗೆ ನೀಡಬೇಕಾಗುತ್ತದೆ. ನಂತರ ಗಾಂಧಿ ಕುಟುಂಬವನ್ನು ಒಲಿಸಲು ಕರ್ನಾಟಕವನ್ನೇ ಎಟಿಎಂ ಮಟ್ಟಕ್ಕೆ ಇಳಿಸಲಿದ್ದಾರೆ’ ಎಂದು ಟೀಕಿಸಿದರು.