ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಭಾರತ, 2047ರ ವೇಳೆಗೆ ವಿಶ್ವದ ನಾಯಕನಾಗಲಿದೆ ಎಂದು ಉಪರಾಷ್ಟ್ರಪತಿ ಜಗ್ದೀಪ್ ಧನಕರ್ ಹೇಳಿದ್ದಾರೆ.
ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಆಯೋಜಿಸಿದ್ದ ‘ರುಸ್ತಂಜೀ ಸ್ಮರಣಾರ್ಥ‘ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇವಲ ದಶಕದ ಹಿಂದೆ, ಭಾರತ ಆರ್ಥಿಕತೆಯಲ್ಲಿ 11ನೇ ದೊಡ್ಡ ದೇಶವಾಗಿತ್ತು. 2022ರ ಸೆಪ್ಟೆಂಬರ್ನಲ್ಲಿ ನಾವು ಬ್ರಿಟನ್ ದೇಶವನ್ನು ಹಿಂದಿಕ್ಕುವ ಮೂಲಕ ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ, ನಾವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತೇವೆ ಎಂದು ಅವರು ಹೇಳಿದರು.
ನಾವು ಡಿಜಿಟಲ್ ಆರ್ಥಿಕತೆ ವಿಷಯದಲ್ಲೂ ಮುಂಚೂಣಿಯಲ್ಲಿದ್ದೇವೆ. 2022ರಲ್ಲಿ ನಮ್ಮ ಡಿಜಿಟಲ್ ವಹಿವಾಟು, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಧನಕರ್ ಹೇಳಿದರು.
ದೇಶದ ಭದ್ರತೆಗಾಗಿ ಹಗಲಿರುಳು ದುಡಿಯುತ್ತಿರುವ ಬಿಎಸ್ಎಫ್ ಹಾಗೂ ವಿವಿಧ ರಕ್ಷಣಾ ಪಡೆಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.
1965ರಲ್ಲಿ ಬಿಎಸ್ಎಫ್ ಸ್ಥಾಪಿಸಲಾಯಿತು. ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತೀಯ ಗಡಿ ಕಾಯುವ ಕೆಲಸದಲ್ಲಿ ನಿರತವಾಗಿದೆ.