ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಳಿ ಗಡಿ ನಿಯಂತ್ರಣ ರೇಖೆ ದಾಟಿ ದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಕುಪ್ವಾರದ ಮಾಚಿಲ್ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದಿಂದ ಕಾಶ್ಮೀರದ ಗಡಿ ಭಾಗದಲ್ಲಿ ಭಾರತದೊಳಕ್ಕೆ ಉಗ್ರರ ನುಸುಳುವಿಕೆ ಕಡಿಮೆಯಾಗಿತ್ತು. ಕೆಲವು ಬಾರಿ ಉಗ್ರರು ನುಸುಳುವಿಕೆಗೆ ಯತ್ನಿಸಿದ್ದು, ಅದನ್ನು ಸೇನೆ ವಿಫಲಗೊಳಿಸಿತ್ತು.
ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಳಕ್ಕೆ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಶಾಂತಿ, ಸಾಮರಸ್ಯ ಕದಡುವುದೇ ಅದರ ಉದ್ದೇಶ. ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಬೇಸಿಗೆ ಆರಂಭಗೊಂಡಿದೆ. ಈ ವೇಳೆ ಕಾಶ್ಮೀರದಲ್ಲಿ ಪಾಕಿಸ್ತಾನದ ರಕ್ಷಣಾ ಏಜೆನ್ಸಿಗಳು ಭಯೋತ್ಪಾದನಾ ಚಟುವಟಿಕೆಗಳನ್ನು ಉಲ್ಬಣಗೊಳಿಸಲು ಷಡ್ಯಂತ್ರ ರೂಪಿಸುವುದು ಹೆಚ್ಚಿರುತ್ತದೆ. ಹಾಗಾಗಿ, ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರ ಚಟುವಟಿಕೆಗಳ ನಿಗ್ರಹಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಸೇನೆ ತಿಳಿಸಿದೆ.