ರಾಂಚಿ: ಕೋವಿಡ್–19 ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತ ಅವರು 50 ಸಾವಿರ ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಮನಸುಖ್ ಮಾಂಡವೀಯ ಅವರು ಕರೆದಿದ್ದ ಕೋವಿಡ್ ಪರಿಶೀಲನಾ ಸಭೆಗೆ ವರ್ಚುವಲ್ ಆಗಿ ಹಾಜರಾಗಿದ್ದ ವೇಳೆ ಗುಪ್ತ, ಲಸಿಕೆಯ ಬೇಡಿಕೆ ಇಟ್ಟಿದ್ದಾರೆ.
'ಜಾರ್ಖಂಡ್ನಲ್ಲಿ ಸದ್ಯ ಕೋವಿಡ್ ಲಸಿಕೆ ಲಭ್ಯವಿಲ್ಲ. ನಾವು ಎರಡು ವಾರಗಳ ಹಿಂದೆಯೇ ಕನಿಷ್ಠ 50 ಸಾವಿರ ಡೋಸ್ ಲಸಿಕೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಆದರೆ, ಅದು ಇನ್ನೂ ಬಂದಿಲ್ಲ' ಎಂದು ಮಾಂಡವಿಯ ಅವರಿಗೆ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಜಾರ್ಖಂಡ್ನಲ್ಲಿ 60 ಸಕ್ರಿಯ ಪ್ರಕರಣಗಳಿವೆ. ಸೌಮ್ಯ ಲಕ್ಷಣಗಳನ್ನು ಹೊಂದಿರುವ ಬಹುತೇಕ ಸೋಂಕಿತರು, ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನಸುಖ್ ಮಾಂಡವೀಯ ಅವರು, ಎಚ್ಚರದಿಂದ ಇರುವಂತೆ ಮತ್ತು ಸೋಂಕು ನಿರ್ವಹಣೆಗೆ ಸಜ್ಜಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.