ಪುಣೆ: ಲೋಕಮಾನ್ಯ ಬಾಲಗಂಗಾಧರ ತಿಲಕರು ಇಂದು ಬದುಕಿದ್ದಿದ್ದರೆ, ಅವರ ಹೆಸರಿನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಪ್ರದಾನ ಮಾಡುವುದನ್ನು ಸ್ವತಃ ಅವರೇ ಒಪ್ಪುತ್ತಿರಲಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮಂಗಳವಾರ ಹೇಳಿದ್ದಾರೆ.
ಪುಣೆ ಮೂಲದ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್, ತಿಲಕರ 103ನೇ ಜನ್ಮದಿನಾಚರಣೆಯ ಅಂಗವಾಗಿ ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಪಟೋಲೆ, ‘ತಿಲಕ್ ಸ್ಮಾರಕ ಮಂದಿರ ಟ್ರಸ್ಟ್’ ಜವಹರಲಾಲ್ ನೆಹರೂ ಅವರಿಂದ ಶಕ್ತಿ ಪಡೆದುಕೊಂಡಿದೆ. ಪ್ರಶಸ್ತಿ ನೀಡುವುದಕ್ಕೆ ಮಾನದಂಡವೇನು ಎಂಬುದು ಟ್ರಸ್ಟ್ಗೆ ಸಂಬಂಧಿಸಿದ ವಿಚಾರ. ಆದರೆ, ಇಂದು ತಿಲಕರು ಏನಾದರೂ ಬದುಕಿದ್ದಿದ್ದರೆ, ಆ ಪ್ರಶಸ್ತಿಯನ್ನು ಮೋದಿಗೆ ನೀಡುವುದನ್ನು ಸ್ವತಃ ಅವರೇ ವಿರೋಧಿಸುತ್ತಿದ್ದರು‘ ಎಂದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಅವರ ಸೋದರನ ಮಗ ಅಜಿತ್ ಪವಾರ್ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.