ಕೊಲ್ಹಾಪುರ: ತಮ್ಮ ಪಕ್ಷ ವಿಭಜನೆಯಾಗಿದೆ ಎನ್ನುವುದನ್ನು ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ನಿರಾಕರಿಸಿದ್ದಾರೆ.
ಕೆಲವು ಶಾಸಕರು ಬಿಟ್ಟು ಹೋಗಿದ್ದು ನಿಜವಷ್ಟೇ, ಶಾಸಕರೆಂದರೆ ಇಡೀ ರಾಜಕೀಯ ಪಕ್ಷ ಅಲ್ಲ ಎಂದು ಅವರು ಹೇಳಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ತಾನು ಹಾಗೂ ರಾಜ್ಯ ಘಟಕದ ಅಧ್ಯಕ್ಷರಾಗಿ ಜಯಂತ್ ಪಾಟೀಲ್ ಅವರು ಇದ್ದಾರೆ. ಎನ್ಸಿಪಿಯಲ್ಲಿ ವಿಭಜನೆ ಉಂಟಾಗಿಲ್ಲ. ಕೆಲವು ಶಾಸಕರು ಪಕ್ಷ ಬಿಟ್ಟಿದ್ದಾರೆ ಎನ್ನುವುದು ನಿಜವಷ್ಟೇ. ಅದರೆ ಶಾಸಕರೆಂದರೆ ಇಡೀ ರಾಜಕೀಯ ಪಕ್ಷ ಅಲ್ಲ. ಬಂಡಾಯಗಾರರ ಹೆಸರು ಹೇಳಿ ಅವರಿಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು’ ಎಂದು ಪವಾರ್ ಅವರು ಪ್ರಶ್ನೆ ಮಾಡಿದ್ದಾರೆ.
ಪಕ್ಷದ ವಿರುದ್ಧ ಬಂಡೆದ್ದವರ ಬಗ್ಗೆ ಮೃದು ಧೋರಣೆ ಏಕೆ ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಶಿಂದೆ ನೇತೃತ್ವದ ಸರ್ಕಾರಕ್ಕೆ ಸೇರುವ ಬಗ್ಗೆ ಕೆಲವು ಶಾಸಕರು ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾವು ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ವಿರೋಧಿಸುತ್ತೇವೆ. ಕೇಂದ್ರ ತನಿಖಾ ತಂಡಗಳ ದುರ್ಬಳಕೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ಎನ್ಸಿಪಿಯಲ್ಲಿ ವಿಭಜನೆ ಉಂಟಾಗಿಲ್ಲ. ಅಜಿತ್ ಪವಾರ್ ಅವರು ಪಕ್ಷದ ನಾಯಕರು ಎಂದು ತಮ್ಮ ಪುತ್ರಿಯೂ ಆಗಿರುವ ಎನ್ಸಿಪಿಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರ ಮಾತಿನ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಅವರು, ಹೌದು, ಇದರಲ್ಲಿ ತಕರಾರು ಇಲ್ಲ ಎಂದು ಹೇಳಿದ್ದರು. ಬಳಿಕ ತಾವು ಹಾಗೆ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.