ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಶಸ್ತ್ರಸಜ್ಜಿತರಿಂದ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ

Published 31 ಮೇ 2023, 19:05 IST
Last Updated 31 ಮೇ 2023, 19:05 IST
ಅಕ್ಷರ ಗಾತ್ರ

ಗುವಾಹಟಿ: ಮಣಿಪುರದಲ್ಲಿಯೇ ವಾಸ್ತವ್ಯ ಹೂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಮೈತೇಯಿ ಮತ್ತು ಕುಕಿ ಸಮುದಾಯದ ನಾಯಕರ ನಡುವಣ ಮಾತುಕತೆ ನಡೆಸಿ ಶಾಂತಿ ಪುನರ್‌ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಬುಧವಾರ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ.‌‌

ಬಿಷ್ಣುಪುರ್ ಮತ್ತು ಚುರಚಂದಪುರ ಜಿಲ್ಲೆಗಳಲ್ಲಿನ ಹಲವು ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಕಿಡಿಗೇಡಿಗಳು ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಹಲವು ನಾಗರಿಕರು ಗಾಯಗೊಂಡಿದ್ದಾರೆ.

ಇಂಫಾಲ್‌ ಪಶ್ಚಿಮ ಜಿಲ್ಲೆಯ ತೌಬಾನ್ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹಲವು ಮನೆಗಳು ಹಾಗೂ ಕುಕಿ ಸಮುದಾಯ ಹೆಚ್ಚಿರುವ ಕಾಂಗ್ಪೋಪಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಗಡಿಯಲ್ಲೂ ಪರಿಶೀಲನೆ: ಭಾರತ ಮತ್ತು ಮ್ಯಾನ್ಮಾರ್‌ ಗಡಿಗೆ ಹೊಂದಿರುವ ಮೊರೆಹ್ ಮತ್ತು ಕಾಂಗ್ಪೋಪಿ ಜಿಲ್ಲೆಗಳಿಗೆ ಅಮಿತ್‌ ಶಾ ಅವರು ಬೆಳಿಗ್ಗೆ ಭೇಟಿ ನೀಡಿ ಎರಡೂ ಬುಡಕಟ್ಟು ಸಮುದಾಯದ ನಾಯಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಶಾಂತಿ ನೆಲೆಗೊಳ್ಳಲು ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಸೇನಾ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ನಡುವೆ ಸಭೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಬಗ್ಗೆ ಚರ್ಚಿಸಿದರು.

ಚುರಚಂದಪುರ ನಗರದಲ್ಲಿ ಮಂಗಳವಾರ ಬುಡಕಟ್ಟು ನಾಯಕರನ್ನು ಭೇಟಿ ಮಾಡಿದ್ದ ಶಾ ಅವರು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. 

ಹಿಂಸಾಚಾರದಲ್ಲಿ ಇಲ್ಲಿಯವರೆಗೆ 75 ಜನರು ಮೃತಪಟ್ಟಿದ್ದು, ಎರಡು ಸಾವಿರ ಮನೆಗಳು ಭಸ್ಮವಾಗಿವೆ. 35 ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ. ಸೇನೆ ಮತ್ತು ಅರೆಸೇನಾ ‍ಪಡೆಯ 34 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ. ಹಿಂಸಾಚಾರದ ವೇಳೆ ಪೊಲೀಸ್‌ ಠಾಣೆಗಳಲ್ಲಿದ್ದ 1,014 ಶಸ್ತ್ರಾಸ್ತ್ರಗಳನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ. ಈ ಪೈಕಿ 500 ಶಸ್ತ್ರಾಸ್ತ್ರಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ. ಉಳಿದವು ಕಿಡಿಗೇಡಿಗಳ ಬಳಿ ಇರುವುದರಿಂದ ಭದ್ರತಾ ಪಡೆಯ ಯೋಧರು ಮತ್ತು ನಿರಾಶ್ರಿತ ಶಿಬಿರಗಳಲ್ಲಿ ಇರುವ ಜನರ ನಿದ್ದೆಗೆಡುವಂತಾಗಿದೆ.

‘ಹೊತ್ತೊಯ್ದಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ವಾಪಸ್‌ ನೀಡಬೇಕು. ಸೇನಾ ಪಡೆಗಳು ಈಗಾಗಲೇ ಪತ್ತೆ ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ಶಸ್ತ್ರಾಸ್ತ್ರ ಸಿಕ್ಕಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎನ್‌. ಬಿರೆನ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.   

ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಮಣಿಪುರದ ಬುಡಕಟ್ಟು ಜನ –ಪಿಟಿಐ ಚಿತ್ರ
ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಮಣಿಪುರದ ಬುಡಕಟ್ಟು ಜನ –ಪಿಟಿಐ ಚಿತ್ರ
ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ
ಮಣಿಪುರದ ಬುಡಕಟ್ಟು ಸಂಘಟನೆಗಳ ಮುಖಂಡರು ಬುಧವಾರ ದೆಹಲಿಯ ಜಂತರ್‌ ಮಂತರ್‌ನಲ್ಲಿ ಒಗ್ಗಟ್ಟಿನ ಯಾತ್ರೆ ನಡೆಸಿದರು. ಜನಾಂಗೀಯ ಘರ್ಷಣೆಯನ್ನು ಶಮನಗೊಳಿಸುವ ಕಾರ್ಯ ನಡೆಯುತ್ತಿದೆ. ಕೂಡಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು. ಈ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
5ರವರೆಗೆ ಇಂಟರ್‌ನೆಟ್‌ ಸಂಪರ್ಕ ಕಡಿತ
ಹಿಂಸಾಚಾರ ಮತ್ತೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಮೊಬೈಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯ ಬಳಕೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಜೂನ್‌ 5ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  ಹಲವೆಡೆ ರಸ್ತೆ ಸಂಚಾರ ಬಂದ್‌ ಮಾಡಿರುವುದರಿಂದ ಭದ್ರತಾ ಪಡೆಯ ಯೋಧರು ಮತ್ತು ಅಗತ್ಯ ವಸ್ತುಗಳ ಸಾಗಣೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ನಾಗರಿಕರು ರಸ್ತೆ ಬಂದ್‌ ಮಾಡದಂತೆ ಮುಖ್ಯಮಂತ್ರಿ ಬಿರೆನ್‌ ಸಿಂಗ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT