ನವದೆಹಲಿ (ಪಿಟಿಐ): ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಮಣಿಪುರದ ಕುಕಿ ಸಮುದಾಯದವರು ಗೃಹ ಸಚಿವ ಅಮಿತ್ ಶಾ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಕಾರರು ‘ಕುಕಿ ಸಮುದಾಯ ಉಳಿಸಿ’ ಎಂಬ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.
ಕೇವಲ ನಾಲ್ಕು ಮಂದಿಗೆ ಮಾತ್ರ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿ, ಉಳಿದವರನ್ನು ಜಂತರ್ಮಂತರ್ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಹಲವು ದಿನಗಳಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರದಲ್ಲಿ ಈವರೆಗೆ 98 ಮಂದಿ ಪ್ರಾಣ ಕಳೆದಕೊಂಡಿದ್ದು, 310 ಜನರು ಗಾಯಗೊಂಡಿದ್ದಾರೆ. 37,450ಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಶಿಷ್ಟ ಪಂಗಡ (ಎಸ್ಟಿ ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆ ವಿರೋಧಿಸಿ ಮೇ 3 ರಂದು ಗುಡ್ಡಗಾಡು ಜಿಲ್ಲೆಗಳಲ್ಲಿ ಮೆರವಣಿಗೆ ಆಯೋಜಿಸಿದ್ದ ನಂತರ ಮಣಿಪುರದಲ್ಲಿ ಘರ್ಷಣೆ ಭುಗಿಲೆದ್ದಿತು.